ಮೈಸೂರು ಮೃಗಾಲಯಕ್ಕೆ 2 ಬ್ಯಾಟರಿ ಚಾಲಿತ ವಾಹನಗಳ ಕೊಡುಗೆ

1 min read

ಮೈಸೂರು: ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ಕೊಡುಗೆಯಾಗಿ ನೀಡಲಾಗಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತದ ಸಿಎಸ್‌ಆರ್ ಅನುದಾನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಎರಡು ವಾಹನಗಳನ್ನು ನೀಡಲಾಗಿದೆ.

ಸೋಮವಾರ ಮೃಗಾಲಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಯಮಿತದ ಅಧ್ಯಕ್ಷರಾದ ಡಾ.ಶೈಲೇಂದ್ರ ಕೆ.ಬೆಲ್ದಾಳೆ ಅವರು, ವಾಹನಗಳ ಕೀಯನ್ನು ಕರ್ನಾಟಕ ವಸ್ತು ಪ್ರದರ್ಶನ ಪ್ರಾಕಾರದ ಅಧ್ಯಕ್ಷರಾದ ಎಲ್.ಆರ್. ಮಹದೇವ ಸ್ವಾಮಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶೈಲೇಂದ್ರ ಕೆ. ಬೆಲ್ದಾಳೆ ಅವರು, ಮೃಗಾಲಯದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ನೀಡುವಂತೆ ಪ್ರಾಕಾರದ ಅಧ್ಯಕ್ಷರು ಮನವಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ನಿಗಮದ ಸಿಎಸ್‌ಆರ್ ಅನುದಾನದಡಿ ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ನೀಡಲಾಗಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅನುದಾನವನ್ನು ಮೃಗಾಲಯ ಪ್ರಾಕಾರಕ್ಕೆ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಮೃಗಾಲಯ ಸ್ಥಾಪಿಸುವಂತೆ ಅಧ್ಯಕ್ಷರಲ್ಲಿ ಮನವಿ ಮಾಡಲಾಗಿದ್ದು, ನಿಗಮದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಕರ್ನಾಟಕ ಮೃಗಾಲಯ ಪ್ರಾಕಾರದ ಅಧ್ಯಕ್ಷ ಎಲ್.ಆರ್. ಮಹದೇವ ಸ್ವಾಮಿ ಮಾತನಾಡಿ, ಮೃಗಾಲಯದ ಅಭಿವೃದ್ದಿಗಾಗಿ ಸರಕಾರದ ನಾನಾ ನಿಗಮ ಮಂಡಳಿ ಸೇರಿದಂತೆ ಕೈಗಾರಿಕೆಗಳಿಗೆ ಸಿಎಸ್‌ಆರ್ ಅನುದಾನ ನೀಡುವಂತೆ ಮನವಿ ಮಾಡಲಾಗಿದ್ದು, ಸಾಕಷ್ಟು ಸ್ಪಂದನೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೊದಲ ಹಂತದಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರು ಸಿಎಸ್‌ಆರ್‌ನಡಿ 10 ಲಕ್ಷ ರೂ. ಅನುದಾನ ನೀಡಿದ್ದು, ಇನ್ನೂ 50 ಲಕ್ಷ ರೂ.ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.

ಮೃಗಾಲಯದಲ್ಲಿ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಈಗಾಗಲೇ 14 ಬ್ಯಾಟರಿ ಚಾಲಿತ ವಾಹನಗಳಿದ್ದು, ಈಗ ಹೊಸದಾಗಿ ಎರಡು ವಾಹನಗಳು ಸೇರ್ಪಡೆಯಾಗಿದ್ದು, ಒಟ್ಟು 16 ವಾಹನಗಳು ಮೃಗಾಲಯದಲ್ಲಿ ಹಿರಿಯ ನಾಗರೀಕರು ಮತ್ತು ಮಕ್ಕಳ ಸೇವೆ ಮುಕ್ತವಾಗಿ ಸಿಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿಗಮದ ಎಂಡಿ ಡಾ.ಎಂ.ಆರ್.ರವಿ, ನಿರ್ದೇಶಕ ಎಸ್.ಮಹದೇವ ಸ್ವಾಮಿ, ಪ್ರಾಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಇದ್ದರು.

About Author

Leave a Reply

Your email address will not be published. Required fields are marked *