ನಗರದಲ್ಲಿನ `ಹುಕ್ಕಾ ಬಾರ್’ ಮುಚ್ಚಿಸಿ: ಪೊಲೀಸರಿಗೆ ಮೇಯರ್ ಸುನಂದಾ ಪಾಲನೇತ್ರ

1 min read

ಮೈಸೂರು,ಜ.17-ನಗರದಲ್ಲಿರುವ `ಹುಕ್ಕಾ ಬಾರ್’ ಗಳನ್ನು ಪೊಲೀಸರು ಮುಚ್ಚಿಸಬೇಕು ಎಂದು ಮಹಾಪೌರರಾದ ಸುನಂದಾ ಪಾಲನೇತ್ರ ಹೇಳಿದ್ದಾರೆ.
ಇಂದು ಮೈಸೂರು ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರಪಾಲಿಕೆ ವತಿಯಿಂದ ಹುಕ್ಕಾ ಬಾರ್ ಬಂದ್ ಮಾಡಲು ಒಪ್ಪಿಗೆ ನೀಡುತ್ತದೆ. ನಾವು ಪೊಲೀಸ್ ಇಲಾಖೆಗೆ ಪತ್ರ ಬರೆದು ಸೂಕ್ತ ಕ್ರಮ ತೆಗೆದುಕೊಳ್ಳಲು ಹೇಳುತ್ತೇವೆ ಎಂದಿದ್ದಾರೆ.
ಕೋವಿಡ್ ಹೆಚ್ಚುತ್ತಿರುವ ಹಿನ್ನಲೆ ಮಕ್ಕಳಿಗೆ ಶಾಲೆ ರಜೆ ಇದೆ. ಈ ವೇಳೆ ಮಕ್ಕಳು ದುರಾಭ್ಯಾಸಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಕಾರ್ಯಾಚರಣೆ ಮಾಡಿ ಹುಕ್ಕಾ ಬಾರ್ ಮುಚ್ಚಿಸಬೇಕು ಎಂದು ಕೋರಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಕಾರ್ಯಗಳಾಗದೆ ಇರುವುದರಿಂದ ಪಾಲಿಕೆ ಸದಸ್ಯರು ಬೇಸತ್ತಿದ್ದಾರೆ. ಸಭೆಯಲ್ಲಿ ರಸ್ತೆ ದುರಸ್ತಿ ಬಗ್ಗೆ ಹಣ ಬಿಡುಗಡೆ ಮಾಡದೆ ಇರುವ ಹಾಗೂ ಕಾಮಗಾರಿಗೆ ಹಣ ಬಿಡುಗಡೆ ಮಾಡಿ ಲೂಟಿ ಹೊಡೆದಿರುವ ಬಗ್ಗೆ ಚರ್ಚೆ ನಡೆಯಿತು.
ಬೀದಿ ಬೀದಿಗಳಲ್ಲಿ ಹಂದಿಗಳ ಕಾಟ ಹಾಗೂ ನಾಯಿಗಳ ಕಾಟ ಹೆಚ್ಚಾಗುತ್ತಿರುವ ಬಗ್ಗೆ ಚರ್ಚಿಸಲಾಯಿತು. ಹಂದಿ ಹಾವಳಿ ಹೆಚ್ಚಾಗಿರುವುದರಿಂದ ಹಂದಿಗಳನ್ನು ಹಿಡಿದು ಅದರ ಸಾಕಾಣಿಕೆ ಬಗ್ಗೆ ಗುತ್ತಿಗೆ ಕರೆಯಲಾಗುವುದು, ಅದರ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಅವರು ಹೇಳಿದರು.
ಅಲ್ಲದೆ, ಸಭೆಯಲ್ಲಿ ಹಲವಾರು ಯೋಜನೆಗಳ ಬಗ್ಗೆ ಪಾಲಿಕೆ ಸದಸ್ಯರು ಚರ್ಚೆ ನಡೆಸಿದರು. ಸಭೆಯಲ್ಲಿ ಉಪ ಮಹಾಪೌರರಾದ ಅನ್ವರ್ ಬೇಗ್, ನಗರದ ಎಲ್ಲ ವಾರ್ಡ್ ಗಳ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.

About Author

Leave a Reply

Your email address will not be published. Required fields are marked *