ಜ.20ರ ನಂತರ ಶಿರಾಡಿಘಾಟ್ ಸಂಚಾರ ನಿರ್ಬಂಧ ಕುರಿತು ತೀರ್ಮಾನ
1 min read
ಹಾಸನ,ಜ.18- ರಸ್ತೆ ಕಾಮಗಾರಿ ನಡೆಸುವ ಸಲುವಾಗಿ ಶಿರಾಡಿಘಾಟ್ ಮುಚ್ಚುವ ಕುರಿತಂತೆ ಜ.20 ರ ನಂತರ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
ಜ.20 ರಂದು ಜನಪ್ರತಿನಿಧಿಗಳು, ಹಾಸನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.
ಆನೆ ಮಹಲ್ ನಿಂದ ಮಾರನಹಳ್ಳಿವರಗೆ ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್ ನಲ್ಲಿ ವಾಹನ ಸಂಚಾರ ನಿಷೇಧ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡಿರುವ ಮನವಿಯ ಕುರಿತು ಚರ್ಚಿಸಲು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹತ್ವದ ಸಭೆ ಹಾಗೂ ವಿಡಿಯೋ ಸಂವಾದದಲ್ಲಿ ಈ ತೀರ್ಮಾನ ಕೈ ಗೊಳ್ಳಲಾಗಿದೆ.
ಈ ವೇಳೆ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕರಾದ ಹೆಚ್ .ಕೆ.ಕುಮಾರಸ್ವಾಮಿ ಅವರು ಈವರೆಗಿನ ಕಾಮಗಾರಿಯಲ್ಲಿ ಆಗಿರುವ ಕುಂಠಿತ, ನಿರ್ಲಕ್ಷ್ಯಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ಎರಡು ತಿಂಗಳ ಅವಧಿಯಲ್ಲಿ ಹಾಸನದಿಂದ ಸಕಲೇಶಪುರದವರಗಿನ ಒಂದು ಬದಿಯ(ಎರೆಡು ಲೈನ್ ) ರಸ್ತೆ ಕಾಮಗಾರಿ ಪೂರ್ತಿ ಮುಕ್ತಾಯಗೊಳಸಿದರೆ ಮಾತ್ರ ನಂತರದ ಕಾಮಗಾರಿಗೆ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮಾರ್ಗ ಮುಚ್ಚುವ ಬಗ್ಗೆ ಪರಿಶೀಲನೆ ನಡೆಸಬಹುದಾಗಿದೆ ಎಂದು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ತಿಳಿಸಿದರು.
ಶಾಸಕರಾದ ಕುಮಾರಸ್ವಾಮಿ ಅವರು ಸಹ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಗುತ್ತಿಗೆದಾರರು ಈವರೆಗೆ ನಡೆಸಿರುವ ಕಾಮಗಾರಿ ಗಮನಿಸಿದರೆ ಉಳಿದ ಕಾಮಗಾರಿ ಮುಗಿಸಲು ವರ್ಷಗಳೇ ಬೇಕಾಗಬಹುದು. ಹಾಗಾಗಿ ಮೊದಲು ಕೆಲಸ ಮಾಡಿ ಭರವಸೆ ಮೂಡಿಸಿದರೆ ಮಾತ್ರ ದೋಣಿಗಾಲ್ ಮಾರನ ಹಳ್ಳಿ ರಸ್ತೆ ತಾತ್ಕಾಲಿಕವಾಗಿ ಮುಚ್ಚುವ ಬಗ್ಗೆ ಪರಿಶೀಲಿಸಲಾಗುವುದು ಎಂದರು .
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜನ್ ಅವರು ಸಹ ವಿಡಿಯೋ ಸಂವಾದದಲ್ಲಿ ಮಾತನಾಡಿ ಚಾರ್ಮುಡಿ, ಸಂಪಾಜೆ , ಬಿಸಿಲೆ ಘಾಟ್ ಗಳಲ್ಲಿ ದೊಡ್ಡ ವಾಹನಗಳ ಸಂಚಾರ ಸಾಧ್ಯವಿಲ್ಲದ ಕಾರಣ ಬಂದರು ನಗರಿ ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿಘಾಟ್ ಉಳಿದಿರುವ ಏಕೈಕ ಮಾರ್ಗವಾಗಿದೆ. ಇದನ್ನು ಸುದೀರ್ಘ ಕಾಲ ಮುಚ್ಚಿದರೆ ಜನ ಜೀವನ, ಕೈಗಾರಿಕೆ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ .ಕಾಮಗಾರಿ ಪ್ರಗತಿ ಕೂಡ ಆಶಾದಾಯಕವಾಗಿಲ್ಲದ ಕಾರಣ ರಸ್ತೆ ಮುಚ್ಚುವ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಇಂಜಿನಿಯರಿಂಗ್ ಜಾನ್ ಬಾಜ್, ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್, ರಸ್ತೆ ಹೋರಾಟ ಸಮತಿಯ ಪದಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.