`ರಾಣ’ ಚಿತ್ರದ ಹಾಡು ಬಿಡುಗಡೆಗೊಳಿಸಿದ ದುನಿಯಾ ವಿಜಯ್
1 min read
ಬೆಂಗಳೂರು,ಫೆ.11- ಶ್ರೇಯಸ್ಸ್ ಕೆ.ಮಂಜು ನಾಯಕನಾಗಿ ಅಭಿನಯಿಸಿರುವ “ರಾಣ” ಚಿತ್ರದ ಹಾಡೊಂದನ್ನು ದುನಿಯಾ ವಿಜಯ್ ಬಿಡುಗಡೆ ಮಾಡಿದ್ದಾರೆ.
ನಿರ್ಮಾಪಕ ಕೆ.ಮಂಜು ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಚಿತ್ರತಂಡ ಹಾಡನ್ನು ಬಿಡುಗಡೆಗೊಳಿಸಿದೆ. ಶಿವು ಭೇರ್ಗಿ ಬರೆದಿರುವ “ಮಳ್ಳಿ ಮಳ್ಳಿ” ಎಂಬ ಹಾಡಿಗೆ ನಾಯಕ ಶ್ರೇಯಸ್ಸ್ ಹಾಗೂ ಸಂಯುಕ್ತ ಹೆಗಡೆ ಹೆಜ್ಜೆ ಹಾಕಿದ್ದಾರೆ. ಇಮ್ರಾನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಶಿವು ಅದ್ಭುತವಾದ ಸೆಟ್ ಹಾಕಿದ್ದಾರೆ.
ಇದೊಂದು ಬ್ಯಾಚುಲರ್ ಪಾರ್ಟಿ ಕುರಿತಾದ ಹಾಡು. ಇದರಲ್ಲಿ ಸಂಯುಕ್ತ ಹೆಗಡೆ ಮತ್ತು ಶ್ರೇಯಸ್ಸ್ ಅಮೋಘವಾಗಿ ನಟಿಸಿದ್ದಾರೆ. ಶಿವು ಅವರ ಕಲಾ ನಿರ್ದೇಶನ, ಶಿವು ಭೇರ್ಗಿ ಅವರ ಗೀತರಚನೆ, ಇಮ್ರಾನ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಕೆ.ಮಂಜು ಅವರ ಹುಟ್ಚುಹಬ್ಬಕ್ಕೆ ಹಾಡು ಬಿಡುಗಡೆ ಮಾಡಿದ್ದೇವೆ. ಮೇ ವೇಳೆಗೆ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ. ಚಂದನ್ ಶೆಟ್ಟಿ ಈ ಚಿತ್ರದ ಸುಮಧುರ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಗುಜ್ಜಾಲ್ ಟಾಕೀಸ್ ಲಾಂಛನದಲ್ಲಿ ಪುರುಷೋತ್ತಮ ಗುಜ್ಜಾಲ್ ನಿರ್ಮಿಸುತ್ತಿರುವ, ನಂದ ಕಿಶೋರ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬರುತ್ತಿದೆ.
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಕೆ.ಮಂಜು ಅವರು ಮಗನ ಮೇಲಿಟ್ಟರುವ ಪ್ರೀತಿ. ಈ ಹಾಡನ್ನು ನೋಡಿದರೆ ಶ್ರೇಯಸ್ಸ್ ಪಟ್ಟಿರುವ ಶ್ರಮ ತಿಳಿಯುತ್ತದೆ. ಸಂಯಕ್ತ ಅವರ ನಟನೆಯೂ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿ ಬಂದಿರುತ್ತದೆ ಎಂಬ ಭರವಸೆಯಿದೆ. ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸಿದ ದುನಿಯಾ ವಿಜಯ್ ಅವರು ಕೆ.ಮಂಜು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಕೆ.ಮಂಜು ಮಾತನಾಡಿ, ನಮ್ಮ ಮೇಲೆ ಪ್ರೀತಿಯಿಟ್ಟು ಬಂದಿರುವ ದುನಿಯಾ ವಿಜಯ್ ಅವರಿಗೆ ಧನ್ಯವಾದ. ‘ರಾಣ’ ಚಿತ್ರ ಉತ್ತಮವಾಗಿ ಮೂಡಿಬರಲು ನಿರ್ಮಾಪಕ ಪುರುಷೋತ್ತಮ್ ಕಾರಣ . ಯಾವುದಕ್ಕೂ ಕೊರತೆ ಇಲ್ಲದಂತೆ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ನಂದಕಿಶೋರ್ ಕಾರ್ಯವೈಖರಿ ಸೊಗಸಾಗಿದೆ. ನನ್ನ ಮಗನ ಅಭಿನಯವು ಚೆನ್ನಾಗಿದೆ. ಅವನಿಗೆ ನಾನು ಅಪ್ಪು ಅವರ ತರಹ ಬಾಳಬೇಕು ಎಂದು ಹೇಳಿದ್ದೇನೆ ಎಂದು ನುಡಿದರು.
ಮೊದಲು ಅಪ್ಪು ಅವರನ್ನು ನೆನೆದು ಮಾತನಾಡಿದ ನಾಯಕ ಶ್ರೇಯಸ್ಸ್, ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವಲ್ಪ ಮಾತ್ರ ಬಾಕಿಯಿದೆ. ಸಂಯುಕ್ತ ಹೆಗಡೆ ಒಳ್ಳೆಯ ನೃತ್ಯಗಾರ್ತಿ. ಅವರೊಡನೆ ನೃತ್ಯ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಹೆಚ್ಚು ಅಭ್ಯಾಸ ಮಾಡಿದ್ದೆ. ಈ ನಿಟ್ಟಿನಲ್ಲಿ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅವರ ಸಹಾಯಕರ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದರು.
ಹಾಡಿನ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ನಂದಕಿಶೋರ್, ಛಾಯಾಗ್ರಾಹಕ ಶೇಖರ್ ಚಂದ್ರ, ನಟಿ ರಜನಿ ಭಾರದ್ವಾಜ್, ರಮೇಶ್ ರೆಡ್ಡಿ, ದೀಪಕ್ ಇತರರು ಉಪಸ್ಥಿತರಿದ್ದರು.