ಕಾಡಾನೆ ದಾಳಿ ವ್ಯಕ್ತಿಗೆ ಗಾಯ!
1 min read
ಮೈಸೂರು – ಸರಗೂರು : ಹಸು ಮೇಸುತಿದ್ದ ವೇಳೆ ಕಾಡಾನೆ ದಾಳಿ ನಡೆಸಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಂಡೀಪುರ ಅರಣ್ಯ ವ್ಯಾಪ್ತಿಯ ತಾಲ್ಲೂಕಿನ ಮೊಳೆಯೂರು ವಲಯದಲ್ಲಿ ನಡೆದಿದೆ.
ತಾಲ್ಲೂಕಿನ ಕಲ್ಲಹಳ್ಳ ಹಾಡಿಯ ರಾಜಪ್ಪ ಕಾಡಾನೆ ದಾಳಿಯಿಂದಾಗಿ ಗಾಯಗೊಂಡವರು. ರಾಜಪ್ಪ (60) ತಮ್ಮ ಹಾಡಿಯ ಜಮೀನಿನ ಸಮೀಪ ಕಾಡಿನಲ್ಲಿ ಹಸುಗಳನ್ನು ಮೇಯಿಸುತಿದ್ದ ವೇಳೆ ಮಧ್ಯಾಹ್ನ ಸುಮಾರು 3:30ರ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದಾಗಿ ರಾಜಪ್ಪರ ತಲೆ, ಭುಜ ಮತ್ತು ಎರಡು ಕಾಲಿನ ಮಧ್ಯ ಭಾಗದಲ್ಲಿ ತೀವ್ರವಾದ ಗಾಯಗಳಾಗಿವೆ.
ಇನ್ನೂ ಕೆಲಸ ಮುಗಿಸಿ ಹಿಂದಿರುತಿದ್ದ ವೇಳೆ ವಿಚಾರ ತಿಳಿದ ಬಿ.ಮಟಕೆರೆ ಸರ್ಕಾರಿ ಆಸ್ಪತ್ರೆಯ ವೈದ್ಯ ಚಂದ್ರಶೇಖರ್ ತಮ್ಮ ವಾಹನದಲ್ಲಿ ಕರೆತಂದು ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಾಜಪ್ಪರವರನ್ನು ಕೂಡಲೇ ಸರಗೂರಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡುವುದಾಗಿ ತಿಳಿದುಬಂದಿದೆ.
ಆಸ್ಪತ್ರೆಗೆ ವಲಯ ಅರಣ್ಯಾಧಿಕಾರಿ ಪುಟ್ಟರಾಜು, ಆದಿ ವಾಸಿ ಮುಖಂಡ ವೆಂಕಟಸ್ವಾಮಿ ಮುಂತಾದವರು ಭೇಟಿ ನೀಡಿದ್ದರು ಮತ್ತು ಚಿಕಿತ್ಸೆ ಕೊಡಿಸುವುದಾಗಿ ಅರಣ್ಯ ಇಲಾಖೆ ಭರವಸೆ ನೀಡಿದರು.