ಕೊರೊನಾ ಸಂಕಷ್ಟದಲ್ಲೂ ಕರಾಮುವಿಯಿಂದ ದುಂದು ವೆಚ್ಚ: ಕೆ.ಎಸ್.ಶಿವರಾಮು ಆರೋಪ
1 min read
ಮೈಸೂರು,ಅ.22-ಕೊರೊನಾ ಲಾಕ್ ಡೌನ್ ನಡುವೆಯೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ವಿದ್ಯಾರ್ಥಿಗಳ ಶುಲ್ಕದ ಹಣವನ್ನು ದುಂದು ವೆಚ್ಚ ಮಾಡಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಆರೋಪಿಸಿದ್ದಾರೆ.

ಇಂದು ನಗರದ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಕಷ್ಟದ ಸಮಯದಲ್ಲೂ 85 ಲಕ್ಷ ರೂ. ವೆಚ್ಚ ಮಾಡಿ ದುಬಾರಿ ಕಾರುಗಳನ್ನು ಖರೀದಿಸಲಾಗಿದೆ. ಈ ಸಂಬಂಧ ಆರ್.ಟಿ.ಐ ಅಡಿ ಪಡೆದುಕೊಂಡಿರುವ ಮಾಹಿತಿಯನ್ನು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ರವಾನಿಸಲಾಗಿದೆ ಎಂದರು.
ಅಲ್ಲದೆ, ಕರಾಮುವಿಯ ಆರ್ಥಿಕ ಸಂಪನ್ಮೂಲದ ಪೋಲು, ಅತಿಯಾದ ದುಂದುವೆಚ್ಛ ಮತ್ತು ಆರ್ಥಿಕತೆಗೆ ತೀರ್ವ ಹೊರೆ ಹಾಗೂ ಪ್ರವೇಶಾತಿಗೆ ಕುಂದುಂಟು ಮಾಡಿರುವ ಕರಾಮುವಿಯ ಕುಲಪತಿಗಳು ಮತ್ತು ಶಾಸನಬದ್ಧ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ, ವಿದ್ಯಾರ್ಥಿಗಳ ಶುಲ್ಕದ ಹಣದಲ್ಲಿ ಕೋವಿಡ್ -19 ಲಾಕ್ಡೌನ್ ನಡುವೆಯೂ ಹಣಕಾಸು ಸಮಿತಿ ಹಾಗೂ ವ್ಯವಸ್ಥಾಪನಾ ಮಂಡಳಿಯ ತೀರ್ಮಾನವನ್ನು ತಿರುಚಿ, ಕುಲಪತಿಗಳ ಕಚೇರಿ ಉಪಯೋಗಕ್ಕೆ ಹಾಲೀ ಒಂದು 2010ರ ಐಶಾರಾಮಿ ಹೋಂಡಾ ಅಕಾರ್ಡ್, 2010 ಮತ್ತು 2015ರ ಎರಡು ಟೊಯೊಟಾ ಇನ್ನೋವಾ ಕಾರುಗಳು ಲಭ್ಯವಿದ್ದರೂ ಸಹ ಮಾರ್ಚ್ 2021ರಲ್ಲಿ ಸುಮಾರು 85 ಲಕ್ಷ ರೂ. ವೆಚ್ಛದಲ್ಲಿ ಹೆಚ್ಚುರಿಯಾಗಿ ಐಶಾರಾಮಿ 3 ಹೊಸ ಟೊಯೊಟಾ ಇನ್ನೋವಾ ಕಾರುಗಳನ್ನು ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕೆಲವು ವ್ಯವಸ್ಥಾಪನಾ ಮಂಡಳಿಯ ಸದಸ್ಯರ ಸದಸ್ಯರ ರಾಜಕೀಯ ಹಿತಾಸಕ್ತಿ ಹಾಗೂ ಸ್ವಪ್ರತಿಷ್ಟೆ ಮೆರೆಸುವುದಕ್ಕಾಗಿ ರೂಪಾಯಿ 895 ಲಕ್ಷಗಳ ವೆಚ್ಛದಲ್ಲಿ ಸರ್ಕಾರಿ ಶಾಲೆಗಳ ಕಾಂಪೌಂಡ್ ಕಾಮಗಾರಿ, ನವೀಕರಣ ಮತ್ತು ಪೀಠೋಪಕರಣ ಸರಬರಾಜು ಕೈಗೆತ್ತಿಕೊಳ್ಳಲಾಗಿರುತ್ತದೆ. ಇವೆಲ್ಲದರ ಮಧ್ಯೆ ಈ ವರ್ಷ ಪ್ರವೇಶಾತಿ ಶುಲ್ಕವನ್ನು ಏಕಾಏಕಿ ಶೇ.35 ರಿಂದ 50ರವರೆಗೆ ಹೆಚ್ಚಿಸಿರುವುದರ ಜೊತೆಗೆ ಇದೇ ಮೊದಲ ಬಾರಿಗೆ ಸಿಲ್ವರ್ ಜ್ಯುಬಿಲಿ ಫೀಸ್, ಅಡ್ಮೀಷನ್ ಪ್ರೋಸಸ್ ಫೀಸ್, ಡೆವಲಪ್ಮೆಂಟ್ ಫೀಸ್ ಅಲೂಮ್ನಿ ಫೀಸ್ ಕಡ್ಡಾಯಗೊಳಿಸಿ ಕೋವಿಡ್ ಸಾಂಕ್ರಾಮಿಕದ ಆರ್ಥಿಕ ಹೊಡೆತದಿಂದ ಕುಗ್ಗಿ ಹೋಗಿರುವ ವಿದ್ಯಾರ್ಥಿಗಳ ಮೇಲೆ ಶುಲ್ಕ ಹೆಚ್ಚಳದ ಹೊರೆಯನ್ನು ಹೇರಿ ಅವರ ಉನ್ನತ ಶಿಕ್ಷಣದ ಕನಸಿಗೆ ತೊಡಕುಂಟು ಮಾಡಲಾಗಿದೆ ಎಂದು ಹೇಳಿದರು.