ಇಬ್ಬರ ಅಂಗಾಂಗ ದಾನದಿಂದ 5 ಮಂದಿಯ ಜೀವನಕ್ಕೆ ಬೆಳಕು
1 min read
ಮೈಸೂರು,ಫೆ.7-ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರ ಅಂಗಾಂಗ ದಾನದಿಂದ ಐದು ಮಂದಿಯ ಜೀವನದಲ್ಲಿ ಮತ್ತೆ ಬೆಳಕು ಮೂಡಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಪಿ.ನಾಗರಾಜಾಚಾರಿ
ಹಾಗೂ 43 ವರ್ಷದ ರಘು ಎಂಬವರ ಅಂಗಾಂಗ ದಾನದಿಂದ ಐದು ಮಂದಿಯ ಜೀವ ಉಳಿದಿದೆ.
ಅಪಘಾತದಲ್ಲಿ ಇವರಿಬ್ಬರ ಮೆದುಳು ನಿಷ್ಕ್ರಿಯಗೊಂಡಿತ್ತು. ಇವರನ್ನು ಕಳೆದುಕೊಂಡ ನೋವಿನಲ್ಲಿದ್ದರು ಇವರ ಕುಟುಂಬದವರು ಅಂಗಾಂಗ ದಾನ ನಿರ್ಧಾರ ಕೈಗೊಂಡು ಮಾನವೀಯತೆ ಮೆರೆದಿದ್ದಾರೆ.
ನಾಗರಾಜಾಚಾರಿ ಅವರಿಂದ ಯಕೃತ್ತು, ಕಾರ್ನಿಯಾ ಹಾಗೂ ರಘು ಅವರಿಂದ ಯಕೃತ್ತು, ಹೃದಯ ಕವಾಟಗಳು, ಕಾರ್ನಿಯಾವನ್ನು ತೆಗೆದುಕೊಂಡು ಬೇರೆಯವರಿಗೆ ಕಸಿ ಮಾಡಲಾಗಿದೆ.
ಇಬ್ಬರ ಯಕೃತ್ತುಗಳನ್ನು ಮೈಸೂರಿನ ಅಪೊಲೊ ಬಿಜಿಎಸ್ ಆಸ್ಪತ್ರೆ, ಇಬ್ಬರ ಕಾರ್ನಿಯಾಗಳನ್ನು ಮೈಸೂರು ಐ ಬ್ಯಾಂಕ್ ಹಾಗೂ ರಘು ಅವರ ಹೃದಯ ಕವಾಟಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿನ ರೋಗಿಗಳಿಗೆ ಕಸಿ ಮಾಡಲಾಗಿದೆ.
ಅತಿಹೆಚ್ಚು ಅಂಗಾಂಗ ಕಸಿ ನೆರವೇರಿಸಿದ ಮೊದಲ ಆಸ್ಪತ್ರೆ ಅಪೊಲೊ :
ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್ ಈ
ಪ್ರಾಂತ್ಯದಲ್ಲಿ ಅತಿಹೆಚ್ಚು ಅಂಗಾಂಗ ಕಸಿ ನೆರವೇರಿಸಿದ ಮೊದಲ ಆಸ್ಪತ್ರೆಯಾಗಿ ಹೊರಹೊಮ್ಮಿದೆ.
ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್ ಗರಿಷ್ಠ ಸಂಖ್ಯೆಯ ಯಕೃತ್ತು ಮತ್ತು ಮೂತ್ರಪಿಂಡ ಕಸಿ ನೆರವೇರಿಸುವ ಮೂಲಕ ಈ ಪ್ರಾಂತ್ಯದಲ್ಲಿ ಅಂಗಾಂಗ ಕಸಿಗಾಗಿ ಕಾಯುತ್ತಿರುವ ರೋಗಿಗಳ ಬದಕಿನ ದಾರಿದೀಪ ಮತ್ತು ಭರವಸೆಯ ಆಶಾಕಿರಣವಾಗಿದೆ. ಆಸ್ಪತ್ರೆಯು 2021ರಲ್ಲಿ 35 ಅಂಗಾಂಗ ಕಸಿಗಳನ್ನು ಯಶಸ್ವಿಯಾಗಿ ನೆರವೇರಿಸಿದೆ. ಅದರಲ್ಲಿ ಏಕಕಾಲದಲ್ಲಿ ನೆರವೇರಿಸಿದ ಎರಡು ಅಪರೂಪದ ಮೂತ್ರಪಿಂಡ ಮತ್ತು ಮೇದೋಜ್ಜೀರಕ ಗ್ರಂಥಿ ಕಸಿ (ಪ್ಯಾಂಕ್ರಿಯಾಸ್) (ಎಸ್ಕೆಪಿಟಿ) ಸೇರಿವೆ ಎಂದು ಆಸ್ಪತ್ರೆಯ ವೈಸ್ ಪ್ರೆಸಿಡೆಂಟ್ ಮತ್ತು ಯೂನಿಟ್ ಹೆಡ್ ಭರತೀಶ ರೆಡ್ಡಿ ತಿಳಿಸಿದ್ದಾರೆ.
ಅಂಗಾಂಗ ಕಸಿಯು ಅತ್ಯಂತ ಸವಾಲಿನ ಮತ್ತು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ಶಸ್ತ್ರಚಿಕಿತ್ಸೆಯಾಗಿದೆ. ಅದರಲ್ಲಿಯೂ ಏಕಕಾಲದಲ್ಲಿ ಬಹು ಅಂಗಾಂಗ ಕಸಿಯನ್ನು ನೆರವೇರಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ. ಕಳೆದ ಒಂದು ದಶಕದಲ್ಲಿ ಅಂಗಾಂಗ ಕಸಿಯ ಹೊಸ ವಿಧಾನಗಳಿಂದಾಗಿ ಅಂಗಾಂಗ ಕಸಿಯ ಫಲಿತಾಂಶ ಗಣನೀಯವಾಗಿ ಸುಧಾರಿಸಿದ್ದು ರೋಗಿಗಳಲ್ಲಿ ಹೊಸ ಆಶಾಭಾವ ಮೂಡಿದೆ’ ಎಂದು ಅವರು ಹೇಳಿದರು.
ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಮೈಸೂರು ಈ ಪ್ರಾಂತದಲ್ಲಿ ಪರವಾನಗಿ ಪಡೆದಿರುವ ಅಂಗಾಂಗ ಕಸಿ ಕೇಂದ್ರ (ಒಟಿಸಿ)ವಾಗಿದೆ. ಇಲ್ಲಿ ಮೂತ್ರಪಿಂಡ, ಯಕೃತ್ತು, ಮೆದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಮತ್ತು ಸಣ್ಣ ಕರುಳಿನ ಕಸಿಗಳನ್ನು ನಡೆಸಬಹುದಾಗಿದೆ.
ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್, ಅಂಗಾಂಗ ಕಸಿ ಸಂಸ್ಥೆ ಮುಖ್ಯಸ್ಥರು ಮಾತನಾಡಿರುವ ಡಾ.ರಾಜ್ ಕುಮಾರ್ ಪಿ.ವಾಧ್ವಾ,ನಾವು ಅಪೊಲೊ ಬಿಜಿಎಸ್ ಹಾಸ್ಪಿಟಲ್ಸ್ ನಲ್ಲಿ 290 ಅಂಗಾಂಗ ಕಸಿ ನೆರವೇರಿಸಿದ್ದು, ಯಶಸ್ಸಿನ ಪ್ರಮಾಣವೂ ಗರಿಷ್ಠ ಮಟ್ಟದಲ್ಲಿದೆ. ಅಂಗಾಂಗ ಕಸಿ ಸಂಖ್ಯೆಯಲ್ಲಿ ಪ್ರತಿ ವರ್ಷ ಹೆಚ್ಚಳ ಕಾಣುತ್ತಿರುವುದು ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಅಂಗಾಂಗ ಕಸಿಗಾಗಿ ಕಾಯುತ್ತಿರುವವರಿಗೆ ಭರವಸೆ ಮೂಡಿಸಿದೆ ಎಂದರು.