ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ: ಪ್ರಮೀಳಾ ಭರತ್
1 min read
ಮೈಸೂರು,ಫೆ.11- ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಬೇಕಾಗಿರುವುದು ಅತ್ಯವಶ್ಯವಾಗಿದೆ ಎಂದು ನಗರಪಾಲಿಕೆ ಸದಸ್ಯರಾದ ಪ್ರಮೀಳ ಭರತ್ ಹೇಳಿದ್ದಾರೆ.

ಇಂದು 23ನೇ ವಾರ್ಡ್ ವ್ಯಾಪ್ತಿಯ ಜಗನ್ಮೋಹನ ಅರಮನೆ ಮುಂಭಾಗ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಮಾಲೋಚಿಸಿ ಕಸ ವಿಲೇವಾರಿ ಮಾಡುವ ಆಟೋಗಳ ಕೊರತೆಯ ಸಮಸ್ಯೆಯನ್ನು ವಾರ್ಡಿನಲ್ಲಿ ಬಗೆಹರಿಸಿದರು.
ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿ ಮಾತನಾಡಿದ ಅವರು, ದೈನಂದಿನ ಜೀವನದಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆಯನ್ನು ನೀಡಬೇಕು ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಸಾರ್ವಜನಿಕ ಸ್ವಚ್ಛತೆ ಮತ್ತು ನಾಗರಿಕರ ಕರ್ತವ್ಯಗಳು ಕುರಿತು ಮಾತನಾಡುತ್ತ, ಮನೆಯ ಕಸ ಪ್ಲಾಸ್ಟಿಕ್ ಇತರ ತ್ಯಾಜ್ಯಗಳನ್ನು ರಸ್ತೆ ಬದಿ, ಸಾರ್ವಜನಿಕ ಸ್ಥಳದಲ್ಲಿ ಹಾಕುವುದು ಸರಿಯಲ್ಲ. ನಗರಪಾಲಿಕೆಯಿಂದ ಮನೆ ಮನೆಗೆ ಕಸ ಸಂಗ್ರಹಿಸುವ ವಾಹನಗಳಿಗೆ ಕಸವನ್ನು ಬೇರ್ಪಡಿಸಿ ಹಾಕಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಅಧಿಕಾರಿಗಳಾದ ಮೃತ್ಯುಂಜಯ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಮತ್ತು ಪೌರ ಕಾರ್ಮಿಕರು ಹಾಜರಿದ್ದರು.