ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿವಿ ಸಹಯೋಗದಲ್ಲಿ ಸಮಾವೇಶ: ಪ್ರೊ.ಕೆ.ಎಸ್.ರಂಗಪ್ಪ
1 min read
ಮೈಸೂರು,ಸೆ.20-ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಅಕ್ಟೋಬರ್ನಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಶ್ರಾಂತ ಕುಲಪತಿಗಳ ವೇದಿಕೆ ಅಧ್ಯಕ್ಷ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ಮಾನಸಗಂಗೋತ್ರಿ ವಿಜ್ಞಾನಭವನದ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ರಾಜ್ಯ, ದೇಶದಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಕೆಲವು ಗೊಂದಲಗಳು ಮೂಡಿವೆ. ಸಮಾವೇಶದಲ್ಲಿ ಶಿಕ್ಷಣ ನೀತಿಯ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಸಮಾವೇಶವನ್ನು ಉದ್ಘಾಟಿಸಲು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಒಪ್ಪಿದ್ದು, ಕುಲಪತಿಗಳು, ಪ್ರಾಂಶುಪಾಲರು, ಸ್ನಾತಕೋತ್ತರ ಅಧ್ಯಾಪಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಶಿಕ್ಷಣ ನೀತಿಯಲ್ಲಿ ಇರುವ ಪ್ರಮುಖಾಂಶ, ಅದರ ಸಾಧಕ-ಬಾಧಕಗಳ ಬಗ್ಗೆ ಇರುವ ಅನುಮಾನ, ಗೊಂದಲ ನಿವಾರಿಸುವ ಕೆಲಸ ಮಾಡಲಾಗುವುದು. ಶಿಕ್ಷಣ ನೀತಿ ರಚನೆಯಾದರೂ ಪಠ್ಯಕ್ರಮಗಳನ್ನು ರೂಪಿಸುವ ಸ್ವಾತಂತ್ರ್ಯ ಆಯಾಯ ವಿವಿಗಳ ವಿವೇಚನೆಗೆ ಬಿಡಲಾಗಿದೆ ಎಂದು ತಿಳಿಸಿದರು.
ನೇಮಕಾತಿ ಸಮರ್ಪಕವಾಗಿಲ್ಲ: ಕುಲಪತಿಗಳ ನೇಮಕಾತಿಯಲ್ಲಿ ಎಲ್ಲವೂ ಸಮರ್ಪಕವಾಗಿಲ್ಲ. ಎಫ್ವಿಸಿಕೆ ಅಭಿಪ್ರಾಯದಂತೆ ಯಾವುದೇ ವಿವಿಗೆ ಕುಲಪತಿ ನೇಮಕ ಮಾಡಬೇಕಾದ ಸಂದರ್ಭದಲ್ಲಿ ಹಾಲಿ ಇರುವ ಕುಲಪತಿ ನಿವೃತ್ತರಾಗುವ 3-4ತಿಂಗಳ ಮೊದಲೇ ಆಯ್ಕೆ ಪ್ರಕ್ರಿಯೆಗೆ ಸಮಿತಿ ರಚಿಸಬೇಕು. ಇಲ್ಲದಿದ್ದಲ್ಲಿ ನೇಮಕಾತಿ ವಿಳಂಬವಾಗಿ ವಿವಿಗಳು ಸುಲಲಿತವಾಗಿ ನಡೆಯುವುದರಲ್ಲಿ ತೊಂದರೆಯಾಗಲಿದೆ. ಆಯ್ಕೆ ಪ್ರಕ್ರಿಯೆ ಸಮಿತಿ ಉತ್ತಮ ಶಿಕ್ಷಣ ತಜ್ಞರನ್ನು ಒಳಗೊಂಡಿರಬೇಕು. ಪ್ರಸ್ತುತ ಸರ್ಕಾರದ ಹಂಗಿಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಹಾಲಿ ಕುಲಪತಿ ಸ್ಥಾನದಲ್ಲಿರುವವರನ್ನು ನೇಮಕ ಮಾಡದಿರುವುದು ಒಳ್ಳೆಯದು. ದೇಶದಲ್ಲೇ ಮೊದಲ ಬಾರಿಗೆ ರಚನೆಯಾದ ವೇದಿಕೆಯಲ್ಲಿ 70 ಮಂದಿ ಸದಸ್ಯರಿದ್ದು, ಅವರೆಲ್ಲರೂ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಂತಹವರನ್ನು ಸಮಿತಿಗಳಿಗೆ ನೇಮಕ ಮಾಡುವುದು ಸೂಕ್ತ ಎಂದರು.
ರಾಜ್ಯದ ವಿವಿಧ ವಿಶ್ವವಿದ್ಯಾನಿಲಯ ಕುಲಪತಿಗಳ ಅವಧಿ ಮುಗಿಯುವ ಮೂರು ತಿಂಗಳ ಮುನ್ನವೇ ಸರ್ಚ್ ಕಮಿಟಿ ರಚಿಸುವ ಜತೆಗೆ ಆಯಾಯ ಕ್ಷೇತ್ರದ ಪರಣಿತರ ನೇತೃತ್ವದಲ್ಲಿ ನೇಮಕ ಮಾಡಬೇಕು. ಬೋಧಕ-ಬೋಧಕೇತರ ಸಿಬ್ಬಂದಿಗಳನ್ನು ಭರ್ತಿ ಮಾಡಿ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಉನ್ನತ ಶಿಕ್ಷಣದ ಗುಣಮಟ್ಟ ಎತ್ತರಿಸಲು ಸರ್ಕಾರಕ್ಕೆ ಹಲವಾರು ಸಲಹೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ರಚನೆಯಾದ ವೇದಿಕೆಯನ್ನು ದೇಶ ವ್ಯಾಪ್ತಿಗೆ ವಿಸ್ತರಿಸಲಾಗುವುದು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಹಲವಾರು ಸಲಹೆಗಳನ್ನು ಕೊಡಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ರಾಜ್ಯಗಳ ವಿಶ್ರಾಂತ ಕುಲಪತಿಗಳನ್ನು ಸಂಪರ್ಕಿಸಿ ಸದಸ್ಯರನ್ನಾಗಿ ಮಾಡಲಾಗುತ್ತದೆ ಎಂದು ವಿವರಿಸಿದರು.
ಸಲಹೆ ನೀಡಲು ಸಮಿತಿ ಸೀಮಿತ: ವೇದಿಕೆ ಸರ್ಕಾರಕ್ಕೆ ಸಲಹೆ ಕೊಡುವುದಕ್ಕಷ್ಟೇ ಸೀಮಿತವಾಗಿ ಕೆಲಸ ಮಾಡಲಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪಾರದರ್ಶಕ ಹಾಗೂ ಉನ್ನತ ಶಿಕ್ಷಣದ ಬೆಳವಣಿಗೆಗೆ ಕೆಲಸ ಮಾಡಲಿದೆ. ವಾರ್ಷಿಕ ಘಟಿಕೋತ್ಸವವವನ್ನು ವರ್ಷದಲ್ಲಿ ಎರಡು-ಮೂರು ಬಾರಿ ನಡೆಸುವುದರಿಂದ ಅರ್ಹ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದಕ್ಕಾಗಲೀ ಅಥವಾ ಉದ್ಯೋಗಾನ್ವೇಷಣೆಗಳಿಗಾಗಲಿ ತೊಂದರೆಯಾಗುವುದಿಲ್ಲ. ಸರ್ಕಾರದಿಂದ ಆಗಿಂದಾಗ್ಗೆ ಹೊರಡುವ ನಿಯಮಗಳನುಸಾರ ಮೀಸಲಾತಿ ನಿಯಮ ಅನುಸರಿಸಿ ಖಾಲಿ ಇರುವ ಬೋಧಕ-ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವಂತೆ ಕುಲಪತಿಗಳಿಗೆ ಕಾಯಂ ಸೂಚನೆ ನೀಡುವುದು. ಬೋಧಕ ವರ್ಗ ಹಾಗೂ ಮೂಲ ರಚನೆಯನ್ನು ಸದೃಢಗೊಳಿಸಲು ವಿಶ್ವವಿದ್ಯಾನಿಲಯಗಳಿಗೆ ಸಾಕಷ್ಟು ಸಂಪನ್ಮೂಲ ಬೇಕಾಗುತ್ತದೆ. ಜತೆಗೆ, ವಿವಿಗಳು ಸಂಪನ್ಮೂಲಗಳನ್ನು ಸ್ವತಃ ಕ್ರೋಢಿಕರಿಸಿಕೊಳ್ಳಲು ಪ್ರೋತ್ಸಾಹ ನೀಡಬೇಕು. ಹೊಸ ವ್ಯವಸ್ಥೆಯ ಹೊಸ ರೀತಿಯ ಸಿದ್ಧತೆಯನ್ನು ಹೊಸ ವಿಧಾನ ಹಾಗೂ ಹೊಸ ಸೌಲಭ್ಯಗಳನ್ನು ಬಳಸಿಕೊಂಡು ನಿರೀಕ್ಷಿತ ಫಲಿತಾಂಶ ಪಡೆಯಲು ಸಾಮೂಹಿಕ ಪ್ರಯತ್ನ ಅನಿವಾರ್ಯ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಬೋಧಕರು, ಬೋಧನೆ ಮತ್ತು ಸಂಶೋಧನೆಯ ವಿಷಯದಲ್ಲಿ ಸಮರ್ಪಕವಾಗಿ ಕಾರ್ಯೋನ್ಮುಖವಾಗಿರುವವರೇ ಎಂಬುದನ್ನು ತಿಳಿಯಲು ಮೇಲುಸ್ತುವಾರಿ ಮೂಲಕ ಹಾಗೂ ಹೊಣೆಗಾರಿಕೆಯನ್ನು ಪರಿಶೀಲಿಸುವುದು, ಬೋಧಕರ ಕಾರ್ಯಕ್ಕೆ ಅನುಗುಣವಾಗಿ ಅವರ ಉತ್ತಮ ಪ್ರಯತ್ನಗಳನ್ನು ಪ್ರೋತ್ಸಾಹಿಸುವುದು ಹಾಗೂ ಪ್ರಗತಿ ಸಾಧಿಸದ ಬೋಧಕರನ್ನು ಎಚ್ಚರಿಸಲು ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿ ಹಲವಾರು ವಿಚಾರಗಳನ್ನು ಪ್ರಸ್ತಾಪ ಮಾಡಲಾಗುವುದು. ಸರ್ಕಾರ ನಮ್ಮ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಮಾಜಿ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗಡೆ, ಜಂಟಿ ಕಾರ್ಯದರ್ಶಿ ಪ್ರೊ.ಎಸ್.ಆರ್.ನಿರಂಜನ ಹಾಜರಿದ್ದರು.