ಸಿದ್ದಾರ್ಥನಗರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದ ಶಾಸಕ ಎಸ್.ಎ.ರಾಮದಾಸ್
1 min read
ಬೆಂಗಳೂರು,ಜ.26-ಇಂದು ಕೆ.ಆರ್.ಕ್ಷೇತ್ರದ 53ನೇ ವಾರ್ಡ್ ವ್ಯಾಪ್ತಿಯ ಸಿದ್ದಾರ್ಥನಗರ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶಾಸಕ ಎಸ್.ಎ.ರಾಮದಾಸ್ ಉದ್ಘಾಟಿಸಿದರು.

ಇಂದಿರಾ ಕ್ಯಾಂಟೀನ್ ಬಳಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ, ಟೆರಿಷಿಯನ್ ಶಾಲೆ ಹತ್ತಿರ ಶ್ರೀರಾಮ ಉದ್ಯಾನವನದಲ್ಲಿ 35 ಜನ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು ವ್ಯಾಯಾಮ ಸಾಮಗ್ರಿಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ರಾಮದಾಸ್ ಅವರು, ಹೊಲಿಗೆಯಂತ್ರವನ್ನು ಉಚಿತವಾಗಿ ನೀಡುತ್ತಿದ್ದೇವೆ. ನಿಮಗೆ ಬರೀ ಹೊಲಿಗೆ ಯಂತ್ರ ನೀಡುತ್ತಿಲ್ಲ. ಜೊತೆಗೆ ಕೌಶಲ್ಯವನ್ನೂ ನೀಡುತ್ತಿದ್ದೇವೆ. ನಿಮ್ಮ ಟ್ರೈನಿಂಗ್ ಆದ ನಂತರ ನಿಮಗೆ ಕೆಲಸವನ್ನು ಸಹ ನೀಡಲು ಯೋಜನೆ ರೂಪಿಸಿದ್ದೇವೆ ಎಂದು ಹೇಳಿದರು.

ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಮುಂದಿನ ವರ್ಷದಿಂದ ಸ್ತ್ರೀ ಶಕ್ತಿ ಸಂಘಗಳಿಂದ ತಯಾರಾದ ವಸ್ತುಗಳಿಗೆ ಮಾರುಕಟ್ಟೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒದಗಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ ಎಂದರು.
ಕ್ಷೇತ್ರದಲ್ಲಿ ಎಲ್ಲಾ ಕಂಬಗಳಿಗೂ ಸಹ ಎಲ್ ಇ ಡಿ ದೀಪವನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಮುಂದಿನ ವಾರದಿಂದ ಕ್ಷೇತ್ರದಲ್ಲಿರುವ ಪಾರ್ಕ್ ಗಳ ಅಭಿವೃದ್ಧಿ ಕೈಗೆತ್ತಿಕೊಳ್ಳುತ್ತಿದ್ದೇವೆ, ಕ್ಷೇತ್ರದ ಪಾರ್ಕ್ ಗಳನ್ನು ಮಾಡೆಲ್ ರೀತಿಯಾಗಿ ಅಭಿವೃದ್ಧಿಪಡಿಸುವವರಿದ್ದೇವೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ವಿಚಾರವನ್ನು ದೇಶಕ್ಕೆ ನೀಡಿದ್ದಾರೆ. ಅದುವೇ ಭಾರತಕ್ಕೆ ಸ್ವಾತಂತ್ರ್ಯ ಬಂದ 75ನೇ ವರ್ಷದ ಸಂದರ್ಭದಲ್ಲಿ ಎಲ್ಲರಿಗೂ ಸ್ವಂತ ಸೂರು ಎನ್ನುವುದು. ಅದೇ ರೀತಿ ಯಾರು ಬಾಡಿಗೆ ಮನೆಯಲ್ಲಿದ್ದಾರೋ ಅವರಿಗೆ ಒಂದು ವರ್ಷಗಳ ಒಳಗೆ ಸ್ವಂತ ನೀಡಬೇಕೆಂದು ನಿಶ್ಚಯ ಮಾಡಿದ್ದೇವೆ. ಸುಮಾರು 24 ಸಾವಿರ ಅರ್ಜಿಗಳನ್ನು ಹಾಕಿದ್ದರು ಅದರಲ್ಲಿ ಈಗ ಸುಮಾರು 13 ಸಾವಿರ ಅರ್ಜಿಗಳನ್ನ ಅಂತಿಮಗೊಳಿಸಿದ್ದೇವೆ. ಅಲ್ಲದೇ ವಿಶೇಷವಾಗಿ 13 ಸಾವಿರ ಮನೆಗಳನ್ನು ಮಹಿಳೆಯರ ಹೆಸರಿಗೇ ರಿಜಿಸ್ಟರ್ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಶ್ರೀಮತಿ ಡಾ.ರೂಪಾ ಯೋಗೇಶ್, ವಾರ್ಡ್ ಉಸ್ತುವಾರಿ ವಿನಯ್ ಪಾಂಚಜನ್ಯ, ಪ್ರಮುಖರಾದ ಯೋಗೇಶ್ ಬಾಬು, ಅರ್ಜುನ್, ಸೋಮಶೇಖರ್ ಚಿನ್ನು, ಗೌರಿ, ಭಾರತಿ, ಮಂಜುಳ, ಬೂತ್ ಅಧ್ಯಕ್ಷರಾದ ರಂಗನಾಥ್, ಟೈಬು ಸಂತೋಷ್, ಸುನಿಲ್ ಪಂಜಾಬಿ, ಕೇಬಲ್ ಕೃಷ್ಣ, ಬಸವಣ್ಣ, ಪುಟ್ಟಶಾಮಣ್ಣ ಮತಿತ್ತರರು ಹಾಜರಿದ್ದರು.