ಕೆ.ಆರ್.ಕ್ಷೇತ್ರದ ವಾರ್ಡ್ ಗಳಿಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ, ಪರಿಶೀಲನೆ
1 min read
ಮೈಸೂರು,ಅ.28-ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣರಾಜ ಕ್ಷೇತ್ರದ ಕೆಲ ವಾರ್ಡ್ ಗಳಲ್ಲಿ ಸಮಸ್ಯೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಶಾಸಕರಾದ ಎಸ್.ಎ.ರಾಮದಾಸ್ ಅವರು ಕೆಲ ವಾರ್ಡ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ವಾರ್ಡ್ ನಂ. 47, 48, 51, 52, 53, 59, 62, 63, 64 ಮತ್ತು 65 ರಲ್ಲಿ ರಾಮದಾಸ್ ಅವರು ಸಮೀಕ್ಷೆ ನಡೆಸಿದರು. ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಅಲ್ಲದೆ, ಮೊನ್ನೆ ಸುರಿದ ಮಳೆಯಿಂದ ಸಂಭವಿಸಿದ ಅನಾಹುತದಲ್ಲಿ ಮೃತಪಟ್ಟಿದ್ದ ಚಂದ್ರೇಗೌಡರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಧೈರ್ಯ ಹೇಳಿ 5 ಲಕ್ಷ ರೂ. ಪರಿಹಾರವನ್ನು ಸರ್ಕಾರದಿಂದ ಕೊಡಿಸುವುದಾಗಿ ತಿಳಿಸಿದರು.
ನಗರಪಾಲಿಕೆ ಸದಸ್ಯರು, ನಗರಪಾಲಿಕೆಯ ಅಭಿವೃದ್ಧಿ, ಒಳಚರಂಡಿ ಮತ್ತು ಕುಡಿಯುವ ನೀರಿನ ಕಾರ್ಯಪಾಲಕ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಮುಡಾ ಕಾರ್ಯಪಾಲಕ ಅಭಿಯಂತರರು, ಆರೋಗ್ಯಾಧಿಕಾರಿಗಳು ಮತ್ತು ವಲಯವಾರು ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಅಭಿವೃದ್ಧಿ ಅಧಿಕಾರಿಗಳೊಂದಿಗೆ ಹಲವು ವಾರ್ಡ್ ಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಮಳೆ ಬಂದಾಗ ಕೆಲವು ಜಾಗಗಳಲ್ಲಿ ಸಮಸ್ಯೆಯಾಗಿತ್ತು. ಅಂದು ಆ ಸಮಸ್ಯೆಗಳನ್ನು ಬಗೆಹರಿಸಿದ್ದೆವು. ಆದರೆ ಈಗ ಮಳೆ ಬಂದಾಗ ಸುಮಾರು 15 ಕಡೆ ಈ ಸಮಸ್ಯೆ ಕಾಣಿಸಿಕೊಂಡಿದೆ. ನಾವು ಬೆಳಿಗ್ಗೆಯಿಂದ 15 ಜಾಗಗಳಿಗೆ ಹೋಗಿ ನೋಡಿದ್ದೇವೆ. ಸ್ಟಾರ್ಮ್ ವಾಟರ್ ಡ್ರೈನ್ ನಲ್ಲಿ ಸರಿಯಾಗಿ ಸ್ವಚ್ಛ ಮಾಡಿಲ್ಲ ಹಾಗೂ ಇನ್ನಿತರ ಸಣ್ಣ ಕಾರಣಗಳಿಂದ ಸಮಸ್ಯೆಯಾಗಿದ್ದು, ಇದನ್ನು ಪರಿಹಾರ ಮಾಡುವ ದೃಷ್ಟಿಯಿಂದ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ.
ನಿನ್ನೆ ನಡೆದ ಸಭೆಯಲ್ಲಿ ಮೈಸೂರು ನಗರದಲ್ಲಿ ಏನೇನು ಮಳೆಯಿಂದ ಸಮಸ್ಯೆಯಾಗಿದೆಯೋ ಆ ಸಮಸ್ಯೆಯನ್ನು ಬಗೆಹರಿಸಲು ಚರ್ಚಿಸಿ ನವೆಂಬರ್ 15 ರಂದು ಸಭೆಯನ್ನು ಕರೆಯಲಾಗಿದೆ. ಈ ಸಮಸ್ಯೆಗೆ ಒಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳಲು ನಿನ್ನೆ ನಗರಪಾಲಿಕಾ ಆವರಣದಲ್ಲಿ ನಡೆದ ಸಭೆಯಲ್ಲಿ ಹಲವಾರು ತೀರ್ಮಾನಗಳನ್ನು ಕೈಗೊಂಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಹಾಪೌರರಾದ ಸುನಂದಾ ಪಾಲನೇತ್ರ, ನಗರಪಾಲಿಕಾ ಸದಸ್ಯರಾದ ರೂಪ, ಛಾಯಾದೇವಿ, ಬಿ.ವಿ.ಮಂಜುನಾಥ್, ಚಂಪಕ, ಗೀತಾಶ್ರೀ ಯೋಗಾನಂದ್, ಶಾಂತಮ್ಮ ವಡಿವೇಲು, ಶಿವಕುಮಾರ್, ಸಂಬಂಧಪಟ್ಟ ಅಧಿಕಾರಿಗಳು, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು, ಬಿಜೆಪಿ ಕೆ.ಆರ್.ಕ್ಷೇತ್ರದ ಉಪಾಧ್ಯಕ್ಷರಾದ ಎಂ.ಆರ್.ಬಾಲಕೃಷ್ಣ, ಪ್ರಧಾನಕಾರ್ಯದರ್ಶಿ ಓಂ.ಶ್ರೀನಿವಾಸ್, ಬಿ.ಎಲ್.ಎ 1 ಆದ ಪ್ರಸಾದ್ ಬಾಬು, ಆಶ್ರಯ ಸಮಿತಿ ಸದಸ್ಯರಾದ ಹೇಮಂತ್ ಕುಮಾರ್, ಪ್ರಮುಖರಾದ ಯೋಗೇಶ್ ಬಾಬು, ಯೋಗಾನಂದ್, ನಾಗರಾಜ್ ಇನ್ನಿತರರು ಹಾಜರಿದ್ದರು.