ಮುಡಾ ಅಧ್ಯಕ್ಷರಿಗೆ “ಗೌರವ ಡಾಕ್ಟರೇಟ್”
1 min read
- ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಅವರಿಂದ ಪ್ರದಾನ
- ವೇದಿಕ್ ವೆಲ್ನೆಸ್ ಯೂನಿವರ್ಸಿಟಿಯಿಂದ ಕೊಡ ಮಾಡುವ ಗೌರವ
- ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರಿಂದ ಅಭಿನಂದನೆ
ಧರ್ಮಸ್ಥಳ: ವೇದಿಕ್ ವೆಲ್ನೆಸ್ ಯೂನಿವರ್ಸಿಟಿ ಅವರಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿಯನ್ನು ಮುಡಾ ಅಧ್ಯಕ್ಷರು ಸ್ನೇಹ ಬಳಗ ಮೈಸೂರು ಸಂಸ್ಥಾಪಕರಾದ ಹೆಚ್.ವಿ.ರಾಜೀವ್ ಅವರಿಗೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆ ಅವರು ಪ್ರದಾನ ಮಾಡಿದರು.
ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರು ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಆ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಯನ್ನು ಸ್ನೇಹ ಬಳಗ, ಮೈಸೂರು ಹಸಿರು ಪ್ರತಿಷ್ಠಾನ ಮೂಲಕ ಹಮ್ಮಿಕೊಂಡಿದ್ದರು. ಇದಲ್ಲದೆ, ಮೈಸೂರಿನಲ್ಲಿ ಸ್ವಚ್ಛ ಭಾರತ ಅಭಿಯಾನಕ್ಕೂ ಇವರು ಕೈಜೋಡಿಸಿದ್ದಾರೆ. ಅನೇಕ ಸಾರ್ವಜನಿಕ ಕಾರ್ಯಕ್ರಮಗಳು, ಅಭಿಯಾನಗಳನ್ನು ಹಮ್ಮಿಕೊಂಡಿದ್ದಾರೆ. ವೃಕ್ಷ ಲಕ್ಷ ಆಂದೋಲವನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿ ವರ್ಷ ಸಾವಿರಾರು ಗಿಡಗಳನ್ನು ನೆಟ್ಟು ಮಾದರಿಯಾಗಿದ್ದರು. ಹಸಿರು ಮೈಸೂರು ಹಾಗೂ ಸ್ವಚ್ಛ ಮೈಸೂರಿಗೆ ಶ್ರಮಿಸಿರುವ ಇವರನ್ನು ವೇದಿಕ್ ವೆಲ್ನೆಸ್ ಯೂನಿವರ್ಸಿಟಿ, ಫ್ಲೋರಿಡಾ, ಅಮೆರಿಕ ಗುರುತಿಸಿದೆ.
ಗೌರವ ಡಾಕ್ಟರೇಟ್ ಪ್ರದಾನ
ಹೆಚ್.ವಿ.ರಾಜೀವ್ ಅವರು ಪರಿಸರ ಕ್ಷೇತ್ರದಲ್ಲಿನ ಸಾಧನೆ ಪರಿಗಣಿಸಿ ಗೌರವ ಡಾಕ್ಟರೇಟ್ಗೆ ಆಯ್ಕೆಯಾಗಿದ್ದಾರೆ. ಜೊತೆಗೆ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಥೆರೈನ್ ಕುನ್ಹಿರಾಮನ್, ಯೋಗ ಕ್ಷೇತ್ರದ ಸಾಧಕರಾದ ಡಾ. ಯೋಗನಾಥ್ ಅಂಡಿಯಪ್ಪನ್, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶೈಲಾ ತುಳ್ಳರಿ ಅವರಿಗೂ ಗೌರವ ಡಾಕ್ಟರೇಟ್ ಅನ್ನು ಪ್ರದಾನ ಮಾಡಲಾಯಿತು.
ನಾನು ಯಾವತ್ತೂ ಯಾರೂ ಗುರುತಿಸಲಿ ಎಂದು ಈ ಕಾರ್ಯಗಳನ್ನು ಮಾಡಿಲ್ಲ. ಮುಂದೂ ಸಹ ಮಾಡುವುದಿಲ್ಲ. ಆದರೆ, ಸಮಾಜಕ್ಕೆ ನನ್ನಿಂದ ಒಂದು ಒಳ್ಳೆಯ ಕೆಲಸವಾಗಬೇಕು ಎಂಬುದು ನನ್ನ ಉದ್ದೇಶ. ಈಗ ವೇದಿಕ್ ವೆಲ್ನೆಸ್ ಯೂನಿವರ್ಸಿಟಿ ಅವರು ನನ್ನ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡುತ್ತಿರುವುದು ಸಂತಸದ ವಿಚಾರವಾಗಿದೆ. ಅಲ್ಲದೆ, ಇದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
– ಹೆಚ್.ವಿ.ರಾಜೀವ್: ಮುಡಾ ಅಧ್ಯಕ್ಷರು
ಉಸ್ತುವಾರಿ ಸಚಿವರ ಅಭಿನಂದನೆ
ಹೆಚ್.ವಿ. ರಾಜೀವ್ ಅವರನ್ನು ಮೈಸೂರಿನ ಆಸ್ತಿ ಎಂದು ಹೇಳಬಹುದು. ಅವರು ಕಳೆದ 25 ವರ್ಷಗಳಿಂದ ಅನೇಕ ಜನಪರ ಕಾರ್ಯಚಟುವಟಿಕೆಯನ್ನು ಆಯೋಜಿಸುವ ಮುಖಾಂತರ ಮಾದರಿಯಾಗಿದ್ದಾರೆ. ವೃಕ್ಷಲಕ್ಷ ಆಂದೋಲವನ್ನು ಹಮ್ಮಿಕೊಂಡಿದ್ದಲ್ಲದೆ, ಪ್ರತಿ ವರ್ಷ ಮೈಸೂರು ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಮೂಲಕ ಹಸಿರು ಮೈಸೂರಿಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಇನ್ನು ಕೊರೋನಾ ಸಮಯದಲ್ಲಿ ಬಡ ಜನತೆಗೆ ಆಹಾರವನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನು ಸಹ ಮೆರೆದಿದ್ದಾರೆ. ಇಂಥವರಿಗೆ ಈಗ ಗೌರವ ಡಾಕ್ಟರೇಟ್ ಲಭಿಸಿರುವುದು ಸ್ತುತ್ಯರ್ಹ.
– ಎಸ್.ಟಿ. ಸೋಮಶೇಖರ್ ಸಹಕಾರ ಮತ್ತು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರು