ಮೈಸೂರಿನ ಕೋಟೆ ಆಂಜನೇಯಸ್ವಾಮಿ ಮೂಲವಿಗ್ರಹ ದರ್ಶನಕ್ಕೆ ಮುಕ್ತ!
1 min read
ನವೀಕರಣದ ಹಿನ್ನಲೆಯಲ್ಲಿ 2021ರ ನವೆಂಬರ್ ತಿಂಗಳಿನಿಂದ ಮುಚ್ಚಲಾಗಿದ್ದ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಗುರುವಾರದಂದು (ಏ.28) ಸಾರ್ವಜನಿಕ ಪ್ರವೇಶಕ್ಕೆ ತೆರೆದುಕೊಳ್ಳುತ್ತದೆ.
ದೇವಾಲಯದ ಮೇಲ್ಭಾಗ ಶಿಥಿಲಗೊಂಡ ಹಿನ್ನಲೆಯಲ್ಲಿ ಮುಜರಾಯಿ ಇಲಾಖೆಯು ನವೀಕರಣ ಕಾರ್ಯ ಕೈಗೊಂಡಿತ್ತು. ಇದರಿಂದಾಗಿ ಆಂಜನೇಯಸ್ವಾಮಿಯ ಮೂಲವಿಗ್ರಹದ ದರ್ಶನ ಭಕ್ತಾಧಿಗಳಿಗೆ ಅಲಭ್ಯವಾಗಿತ್ತು.

ಆದರೆ, ಮೂಲವಿಗ್ರಹದ ದರ್ಶನ ಇಲ್ಲದಿದ್ದರೂ, ಹೆಬ್ಬಾಗಿಲ ಬಳಿ ಮೂಲ ಆಂಜನೇಯಸ್ವಾಮಿ ದೇವರ ಭಾವಚಿತ್ರ ಹಾಗೂ ಇತರೆ ದೇವರುಗಳ ಮೂರ್ತಿಗಳನ್ನು ಇಟ್ಟು ಪೂಜಾ ವಿಧಿವಿಧಾನಗಳನ್ನು ಎಂದಿನಂತೆ ನೆರವೇರಿಸಲಾಗುತ್ತಿತ್ತು.
ಇದೀಗ ದೇವಾಲಯದ ಮೇಲ್ಭಾಗದ ನವೀಕರಣ ಕಾರ್ಯ ಸಂಪೂರ್ಣ ಮುಗಿದಿದ್ದು, ಏ.28ರ ಗುರುವಾರದಂದು ಸಾರ್ವಜನಿಕರಿಗೆ ಮೂಲದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬುಧವಾರ ಅಂಕುರಾರ್ಪಣ ಹಾಗೂ ಗುರುವಾರ ಮಹಾಸಂಪ್ರೋಕ್ಷಣ ನಡೆಯಲಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.