ತಿಪ್ಪೆ ತೆರುವು ವಿಚಾರ: ಕರ್ತವ್ಯಕ್ಕೆ ಅಡ್ಡಿ, ಅಧಿಕಾರಿಗಳ ಮುಂದೆ ಹೈಡ್ರಾಮಾ
1 min read
ನಂಜನಗೂಡು: ವಿವಾದಿತ ನಿವೇಶನದಲ್ಲಿ ಸುರಿದ ತಿಪ್ಪೆರಾಶಿಯನ್ನ ತೆರುವುಗೊಳಿಸಲು ಬಂದ ಅಧಿಕಾರಿಗಳು ಹಾಗೂ ಪೊಲೀಸರ ಮುಂದೆ ಹೈಡ್ರಾಮಾ ನಡೆದಿದೆ. ಇಡೀ ಕುಟುಂಬ ಪರಸ್ಪರ ಎಳೆದಾಡಿ ನೂಕಾಡಿ ಕಿರುಚಾಡಿದ ಪರಿಣಾಮ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಒಂದೇ ಕುಟುಂಬದ 7ಜನರ ಮೇಲೆ ಎಫ್.ಐ.ಆರ್.ದಾಖಲಾಗಿದೆ.

ನಂಜನಗೂಡು ತಾಲೂಕಿನ ಚಿಕ್ಕಯ್ಯನಛತ್ರ ಹೋಬಳಿ ಹೊಸಕೋಟೆ ಗ್ರಾಮ ಪಂಚಾಯಿತಿ ಗೆ ಸೇರಿದ ಆಲತ್ತೂರು ಗ್ರಾಮದ ಪೌರಕಾರ್ಮಿಕರ ಕಾಲೋನಿಯಲ್ಲಿ ಘಟನೆ ನಡೆದಿದೆ. ಸುಮಾರು ಎರಡು ವರ್ಷಗಳಿಂದ ಖಾಲಿ ನಿವೇಶನದ ಮಾಲೀಕತ್ವದ ವಿಚಾರದಲ್ಲಿ ಶಿವರಾಜ್ ಹಾಗೂ ಪೌರಕಾರ್ಮಿಕರಾದ ಮುರುಗನ್ ನಡುವೆ ವಿವಾದ ನಡೆಯುತ್ತಿದೆ. ಖಾಲಿ ನಿವೇಶನದಲ್ಲಿ ಶಿವರಾಜ್ ಕುಟುಂಬ ತಿಪ್ಪೆಸುರಿದು ವಿವಾದಿತ ನಿವೇಶನವನ್ನ ಆಕ್ರಮಿಸಿಕೊಂಡಿದೆ.

ವಿವಾದಿತ ನಿವೇಶನದಲ್ಲಿ ಸುರಿದಿರುವ ತಿಪ್ಪೆರಾಶಿಯನ್ನ ತೆರುವುಗೊಳಿಸುವಂತೆ ಹೊಸಕೋಟೆ ಗ್ರಾಮಪಂಚಾಯ್ತಿಯಿಂದ ನೋಟೀಸ್ ನೀಡಲಾಗಿದೆ.ನೋಟೀಸ್ ಗೆ ಕ್ಯಾರೆ ಎನ್ನದ ಶಿವರಾಜ್ ಕುಟುಂಬ ಮೊಂಡುತನ ಮಾಡಿ ಸೂಚನೆಯನ್ನ ನಿರ್ಲಕ್ಷಿಸಿದೆ.ಈ ಹಿನ್ನಲೆ ಇಂದು ಹೊಸಕೋಟೆ ಗ್ರಾಮಪಂಚಾಯ್ತಿ ಪಿಡಿಓ ಶಿವಕುಮಾರ್ ತಿಪ್ಪೆ ತೆರವುಗೊಳಿಸಲು ಜೆಸಿಬಿ ಹಾಗೂ ಪೊಲೀಸರ ಭದ್ರತೆಯೊಂದಿಗೆ ಬಂದಿದ್ದಾರೆ. ಈ ವೇಳೆ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಶಿವರಾಜ್ ಕುಟುಂಬ ನಿವೇಶನದಲ್ಲಿ ಬಿದ್ದು ಉರುಳಾಡಿದ್ದಾರೆ.ಹತ್ತಿರ ಬಂದವರ ಮೇಲೆ ಮುಗಿಬಿದ್ದಿದ್ದಾರೆ.
ಪಿಡಿಓ ಶಿವಕುಮಾರ್ ರನ್ನ ಎಳೆದಾಡಿದ್ದಾರೆ. ತಿಪ್ಪೆಯಲ್ಲೇ ಮಲಗಿ ತೆರವುಗೊಳಿಸಲು ಅವಕಾಶ ನೀಡದೆ ಮೊಂಡುತನ ಮಾಡಿದ್ದಾರೆ. ಶಿವರಾಜ್ ಕುಟುಂಬದ ಕಿರುಚಾಟ…ಎಳೆದಾಟ…ಕೂಗಾಟಕ್ಕೆ ಬೆದರಿದ ಪೊಲೀಸರು ಅಸಹಾಯಕರಾಗಿ ನಿಂತಿದ್ದಾರೆ.ಕೊನೆಗೆ ಗ್ರಾಮಪಂಚಾಯ್ತಿ ಸಿಬ್ಬಂದಿಗಳು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹಿಂದಿರುಗಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆ ಪಿಡಿಓ ಶಿವಕುಮಾರ್ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಶಿವರಾಜ್ ಕುಟುಂಬದ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದೆಡೆ ತಿಪ್ಪೆರಾಶಿ ತೆರುವುಗೊಳಿಸಬೇಕೆಂದು ಪೌರಕಾರ್ಮಿಕ ಮುಖಂಡರು ಬಿಳಿಗೆರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.ಅಧಿಕಾರಿಗಳು ಹಾಗೂ ಪೊಲೀಸರ ಮುಂದೆ ನಡೆದ ಹೈಡ್ರಾಮಾ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ…