ಯಾವುದೇ ಕಾರಣಕ್ಕೂ ಲಾಕ್ ಡೌನ್ ಬೇಡ: ಸಂಸದ ಪ್ರತಾಪ್ ಸಿಂಹ
1 min read
ಮೈಸೂರು,ಜ.17-ರಾಜ್ಯದಲ್ಲಿ ಕೊರೊನಾ 3ನೇ ಅಲೆ ಆತಂಕ ಶುರುವಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಸೋಂಕನ್ನು ನಿಯಂತ್ರಿಸಲು ಸರ್ಕಾರ ಲಾಕ್ ಡೌನ್, ಕಠಿಣ ನಿಯಮಗಳನ್ನು ಮಾಡಬಾರದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಜೀವ ಉಳಿಸಿಕೊಂಡಿದ್ದಾರೆ, ಜೀವನ ದುಸ್ಥರವಾಗಿದೆ. ಯಾವುದೇ ಕಾರಣಕ್ಕೂ ಲಾಕ್ ಡೌನ್ ಕಠಿಣ ನಿಯಮ ಬೇಡ. ಆಸ್ಪತ್ರೆಯಲ್ಲಿ ಸೌಲಭ್ಯ ಹೆಚ್ಚಿಸಿ. ಸೋಂಕು ಹರಡದಂತೆ ಎಚ್ಚರ ವಹಿಸಿ ಎಂದಿದ್ದಾರೆ.
ಮೊದಲನೇ ಅಲೆಯಲ್ಲಿ ಆಸ್ಪತ್ರೆ ಸಮಸ್ಯೆ, ಎರಡನೇ ಅಲೆಯಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇತ್ತು. ಈಗ ಎಲ್ಲಾ ಸಮಸ್ಯೆ ಬಗೆಹರಿದಿದೆ. ಆ ಕಾನೂನು ಈ ಕಾನೂನು ಅಂತಾ ಜನರನ್ನು ಸಂಕಷ್ಟಕ್ಕೆ ಸಿಲುಕಿಸಬೇಡಿ ಎಂದು ತಮ್ಮದೇ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಮೇಕೆದಾಟು ಬಂದೂಬಸ್ತ್ ಗೆ ತೆರಳಿದ ಪೊಲೀಸರಿಗೆ ಕೊರೊನಾ ವಿಚಾರವಾಗಿ ಮಾತನಾಡಿದ ಅವರು, ಮೇಕೆದಾಟು ವೇಳೆ ಮುಖ್ಯಮಂತ್ರಿಗಳು ಮನವಿ ಮಾಡಿದರೂ ದೇಶಾದ್ಯಂತ ರ್ಯಾಲಿ ಮಾಡಲು ಸೂಕ್ತ ಕಾಲ ಅಲ್ಲ ಅಂತಾ ಹೇಳಿದ್ರು. ಮೇಕೆದಾಟು ಯೋಜನೆ ಅಂತಾ ದೊಡ್ಡ ಜಾತ್ರೆ ಮಾಡಿದ್ರು ಕಾಂಗ್ರೆಸ್ ನವರು. ಮುಂದೆಯಾದರೂ ಸ್ವಲ್ಪ ಜವಬ್ದಾರಿಯುತವಾಗಿ ವರ್ತಿಸಬೇಕು. ಯಾತ್ರೆ ಮೂಲಕ ಜಾತ್ರೆ ಮಾಡಿ ಜನರಿಗೆ ಮನವರಿಕೆ ಮಾಡಿಸುವುದಲ್ಲ. ಯೋಗ್ಯ ವಿಚಾರ, ಜನರ ಪರವಾಗಿದೆ ಅಂದ್ರೆ ಮಾಧ್ಯಮಗಳ ಮೂಲಕವೂ ಮನವರಿಕೆ ಮಾಡಿಕೊಡಬಹುದು ಎಂದು ಟಾಂಗ್ ನೀಡಿದ್ದಾರೆ.
ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕ ಹೆಚ್ಚಳ ಹಾಗೂ ಬಾಕಿ ಮೊತ್ತಕ್ಕೆ ಬಡ್ಡಿ ವಿಧಿಸಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ನೀರಿನ ಶುಲ್ಕದ ಬಾಕಿ ಮೊತ್ತಕ್ಕೆ ಪಾಲಿಕೆ ಬಡ್ಡಿ ವಿಧಿಸುತ್ತಿದೆ. 140 ಕೋಟಿಯಷ್ಟು ಬಾಕಿ ಶುಲ್ಕಕ್ಕೆ ಸುಮಾರು 73ಕೋಟಿ ಬಡ್ಡಿ ವಿಧಿಸಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಬರೆ ಎಳೆದಂತಾಗುತ್ತದೆ. ಅದಕ್ಕಾಗಿ ಅಸಲು ಬಾಕಿಯನ್ನು ಮಾತ್ರ ವಸೂಲಿ ಮಾಡಿ ಅಂತ ಮನವಿ ಮಾಡಿದ್ದೇನೆ. ಅಸಲು ಬಡ್ಡಿ ಎರಡನ್ನೂ ಪಾವತಿಸಲು ಜನರಿಗೆ ಕಷ್ಟ ಆಗುತ್ತೆ. ಬಡ್ಡಿ ಕಡಿತ ಮಾಡಿದ್ರೆ ಜನ ಅಸಲನ್ನಾದರೂ ಕಟ್ಟುತ್ತಾರೆ. ಈ ವಿಚಾರವನ್ನ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದರು.
ಸಂಸ್ಕ್ರತ ವಿವಿಗೆ ಹಣಬಿಡುಗಡೆಗೆ ಆಕ್ಷೇಪ ವಿಚಾರವಾಗಿ ಮಾತನಾಡಿದ ಅವರು, ನಾರಾಯಣ್ + ಗೌಡ ಅವ್ರ ಹೆಸ್ರಿನಲ್ಲಿ ಸಂಸ್ಕ್ರತ ಅಡಗಿದೆ. ಹಾಗಂತ ನಾರಾಯಣ ಗೌಡರು ತಮ್ಮ ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರಾ? ಸಂಸ್ಕ್ರತ ಬಹಳ ಪ್ರಾಚೀನ ಭಾಷೆ. ಹೀಗಾಗಿಯೇ ರಾಷ್ಟೀಯ ಭಾಷೆ ಮಾಡಬೇಕು ಅಂತಾ ಡಾ.ಬಿ.ಆರ್ ಅಂಬೇಡ್ಕರ್ ಪ್ರಸ್ತಾವನೆ ಸಲ್ಲಿಸಿದ್ರು. ಅಂಬೇಡ್ಕರ್ ಅವ್ರಿಗಿಂದ ಯಾರೂ ಮೇಧಾವಿಗಳು ಇಲ್ಲ ಅಂತಾ ನಾನು ಭಾವಿಸಿದ್ದೇನೆ. ತ್ರಿಭಾಷ ಸೂತ್ರವನ್ನ ಜಾರಿ ಮಾಡಿದ್ದೇ ಇಂದಿರಾಗಾಂಧಿ. ಟಿಪ್ಪು ಕನ್ನಡ ಭಾಷೆ ವಿರೋಧಿ, ಕನ್ನಡಿಗರ ಮೇಲೆ ಪರ್ಶಿಯನ್ ಹೇರಿದ್ದವನು. ಟಿಪ್ಪು ವಿವಿ ಸ್ಥಾಪನೆ ವಿಚಾರ ಜಾರಿಗೆ ಬಂದಾಗ ಇವ್ರು ಯಾಕೆ ಮೌನವಾಗಿದ್ದರು. ಅವ್ರು ಚುನಾವಣೆಗೆ ನಿಂತಾಗ ರೇಡ್ ಆಗಿತ್ತು. ಅವ್ರ ಬಳಿ ಹಣ ಸಿಕ್ಕಿದ್ದು ಎಲ್ಲರಿಗೂ ಗೊತ್ತಿದೆ. ಮೋದಿಯನ್ನ ವಿರೋಧಿಸುವುದನ್ನ ಬಿಡಿ. ಸಂಸ್ಕೃತ ಕನ್ನಡ ಭಾಷೆ ಜೊತೆಗೆ ಬೆರೆತಿದೆ. ಹುಟ್ಟು, ಸಾವು, ನಾಮಕರಣ ಎಲ್ಲದ್ರಲ್ಲೂ ಸಂಸ್ಕೃತ ಬೆರೆತಿದೆ ಎಂದು ಕರವೇ ನಾರಾಯಣಗೌಡರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.