ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಅರಮನೆಗೆ ಆಗಮಿಸಿದ ಪ್ರವಾಸಿಗರಿಗೆ ಹೂ ನೀಡಿ ಸ್ವಾಗತ
1 min read
ಮೈಸೂರು,ಸೆ.27-ವಿಶ್ವ ಪ್ರವಾಸೋದ್ಯಮ ದಿನಾಚರಣೆಯ
ಅಂಗವಾಗಿ ಅರಮನೆಗೆ ಆಗಮಿಸಿದ ಪ್ರವಾಸಿಗರನ್ನು ಹೂ ನೀಡುವ ಮೂಲಕ ಸ್ವಾಗತಿಸಲಾಯಿತು.
ಮೈಸೂರು ಟ್ರಾವೆಲ್ ಅಸೋಸಿಯೇಷನ್, ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಹೋಟೆಲ್ ಮಾಲೀಕರ ಸಂಘ
ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರಮನೆಯ ದಕ್ಷಿಣ ದ್ವಾರದಲ್ಲಿ ಬರುವ ಪ್ರವಾಸಿಗರಿಗೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೂ ನೀಡಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಅವರು, ಅರಮನೆಯಲ್ಲಿ ನಡೆಯುವ ದಸರಾ, ಖಾಸಗಿ ದರ್ಬಾರು, ಚಿನ್ನದ ಸಿಂಹಾಸನ ಜೋಡಣೆ, ಆನೆಗಳ ಸ್ಥಳಾಂತರ ಸೇರಿದಂತೆ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಈ ಬಗ್ಗೆ ಅರಮನೆ ಆಡಳಿತ ಮಂಡಳಿ ಕಚೇರಿಯಲ್ಲಿ ಕೇಳಿ ಎಂದರು.
ಮೈಸೂರು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಶಾಂತ್
ಮಾತನಾಡಿ, ಕೊರೊನಾ ಸಂಕಷ್ಟ ಪರಿಸ್ಥಿತಿಯಿಂದಾಗಿ
ಮೈಸೂರಿನಲ್ಲಿ ಪ್ರವಾಸೋದ್ಯಮ ನೆಲಕಚ್ಚಿದೆ. ಪರಿಣಾಮ
ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿರುವವರ ಸ್ಥಿತಿ
ಚಿಂತಾಜನಕವಾಗಿದೆ. ಹಾಗಾಗಿ ಈ ಬಾರಿಯ ದಸರಾ
ಜಂಬೂಸವಾರಿ ಮೆರವಣಿಗೆಯನ್ನು ಬನ್ನಿಮಂಟಪದವರೆಗೂ
ವಿಸ್ತರಿಸಬೇಕು. ಅದರಿಂದ ಪ್ರವಾಸೋದ್ಯಮದ
ಚೇತರಿಕೆಯಾಗಲಿದೆ. ಅರಮನೆ ಆವರಣಕ್ಕೆ ಸೀಮಿತಗೊಳಿಸಿದರೆ
ಕನಿಷ್ಟ ಎರಡು ಸಾವಿರ ಮಂದಿಗೆ ಅವಕಾಶ ಕಲ್ಪಿಸಬೇಕು.
ಟ್ರಾವಲ್ಸ್ ಅಸೋಸಿಯೇಷನ್ ನವರಿಗೆ ಹೆಚ್ಚಿನ ಆದ್ಯತೆ
ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ
ಡಾ.ಎಂ.ಜಿ.ಮಂಜುನಾಥ, ಹೋಟೆಲ್ ಮಾಲೀಕರ ಸಂಘದ
ಅಧ್ಯಕ್ಷ ನಾರಾಯಣ ಗೌಡ, ಪ್ರವಾಸೋದ್ಯಮ ಇಲಾಖೆಯ
ಸಹಾಯಕ ನಿರ್ದೇಶಕ ಎಚ್.ಬಿ.ರಾಘವೇಂದ್ರ, ಜಯಕುಮಾರ್, ಎ.ಎನ್.ಅಯ್ಯಣ್ಣ, ಅಶೋಕ ಇತರರು ಉಪಸ್ಥಿತರಿದ್ದರು.