ಹಿರಿಯ ನಟ ಸತ್ಯಜಿತ್ ನಿಧನ
1 min read
ಬೆಂಗಳೂರು,ಅ.10-ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ (72) ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸತ್ಯಜಿತ್ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟ ಹಿನ್ನೆಲೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ 2 ಗಂಟೆಗೆ ನಿಧನರಾಗಿದ್ದಾರೆ.
ಸತ್ಯಜಿತ್ ಅವರ ಅಂತಿಮ ದರ್ಶನಕ್ಕೆ ಅವರ ನಿವಾಸದಲ್ಲಿ ಇರಿಸಲಾಗಿದ್ದು, ಸಂಜೆ ವೇಳೆಗೆ ಹೆಗಡೆ ನಗರದ ಖಬರ್ ಸ್ಥಾನ್ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವೃತ್ತಿಯಲ್ಲಿ ಬಸ್ ಚಾಲಕರಾಗಿದ್ದ ಸತ್ಯಜಿತ್ ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅನೇಕ ಊರುಗಳಿಗೆ ತೆರಳಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಇದೇ ಮುಂದೆ ಅವರ ಬಣ್ಣದ ಬದುಕಿಗೆ ದಾರಿಮಾಡಿಕೊಟ್ಟಿತು. ಅವರು ಪೊಲೀಸ್ ಲಾಕ್ ಅಪ್, ನಮ್ಮೂರ ಹಮ್ಮೀರ ಸೇರಿ 600 ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದ್ದಾರೆ.
ಸತ್ಯಜಿತ್ ಅವರ ನಿಜವಾದ ಹೆಸರು ಸಯ್ಯದ್ ನಿಜಾಮುದ್ದೀನ್. ಸಯ್ಯದ್ ನಿಜಾಮುದ್ದೀನ್ ಚಿತ್ರರಂಗಕ್ಕೆ ಪ್ರವೇಶಿಸಿದ ಬಳಿಕ ತಮ್ಮ ಹೆಸರನ್ನು ಸತ್ಯಜಿತ್ ಎಂದು ಬದಲಾಯಿಸಿಕೊಂಡರು. ಮುಂಬೈ ನಲ್ಲಿ ನಾಟಕ ಪ್ರದರ್ಶನ ನೀಡಿದಾಗ ಸತ್ಯಜಿತ್ ಅವರಿಗೆ ನಾನಾ ಪಾಟೇಕರ್ ಅವರ ಪರಿಚಯವಾಗಿ ಬಾಲಿವುಡ್ ನಲ್ಲೂ ಸತ್ಯಜಿತ್ ನಟಿಸಿದ್ದರು.