ಸಿದ್ದರಾಮಯ್ಯ ಅವರನ್ನು ಕೇಳಿ ನಾನು ಅಭ್ಯರ್ಥಿ ನಿರ್ಧರಿಸಬೇಕಾ?: ಮಾಜಿ ಸಿಎಂ ಎಚ್ಡಿಕೆ ಗರಂ
1 min read
ಬೆಂಗಳೂರು,ಅ.2- ಸಿದ್ದರಾಮಯ್ಯ ಅವರನ್ನು ಕೇಳಿ ನಾನು ಅಭ್ಯರ್ಥಿ ನಿರ್ಧರಿಸಬೇಕಾ? ನನಗೆ ಆರ್ಡರ್ ಮಾಡಲು ಸಿದ್ದರಾಮಯ್ಯ ಯಾರು? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುಡುಗಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಿಂದ ಉಪಚುನಾವಣೆಯಲ್ಲಿ ಎಲ್ಲಿ ಯಾವ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೆ ಗೊತ್ತು. ಎಲ್ಲಿ ಯಾವ ಅಭ್ಯರ್ಥಿಯನ್ನು ಹಾಕಬೇಕು ಎಂದು ಇವರನ್ನು ಕೇಳಬೇಕಿಲ್ಲ. ನಮ್ಮ ಪಕ್ಷದ ವಿಚಾರಕ್ಕೆ ತಲೆ ಹಾಕುವುದಕ್ಕೆ ಸಿದರಾಮಯ್ಯ ಯಾರು? ನಮ್ಮ ಪಕ್ಷದ ವಿಚಾರದಲ್ಲಿ ಅವರಿಗೇನು ಅಧಿಕಾರವಿದೆ? ಕಾಂಗ್ರೆಸ್, ಬಿಜೆಪಿಯ ದೊಣ್ಣೆ ನಾಯಕರನ್ನು ಕೇಳಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕೆ ಎಂದು ಪ್ರಶ್ನಿಸಿದರು.
ಮೊದಲು ಸಿದ್ದರಾಮಯ್ಯ ನನ್ನ ಬಗ್ಗೆ, ಜೆಡಿಎಸ್ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದ ಅವರು,ನಾವು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗೆ ಅನ್ಯಾಯ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಇವರು ಯಾರ ಜೇಬು ತುಂಬಿಸಿದ್ದಾರೆ? ಡಿಪಿಆರ್ ಇರೋದು ಇವರ ತೆವಲಿಗೆ ತಕ್ಕಂತೆ ಬದಲಾವಣೆ ಮಾಡುವುದಕ್ಕಾ? ಗುತ್ತಿಗೆದಾರರಿಗೆ ನೀಡಲು ಹಣ ಇತ್ತು. ಆದರೆ, ರೈತರಿಗೆ ನೀಡಲು ಇರಲಿಲ್ಲ ಅಲ್ಲವೆ ಎಂದು ವಾಗ್ದಾಳಿ ನಡೆಸಿದರು.
ಮೀಸಲಾತಿ ವಿಷಯದಲ್ಲಿ ಕೆಲವರು ಕಗ್ಗಂಟು ಸೃಷ್ಟಿಸುತ್ತಿದ್ದಾರೆ. ಮೀಸಲಾತಿಗಿಂತಲೂ ಪ್ರತಿ ಕುಟುಂಬಕ್ಕೆ ಒಂದು ಉದ್ಯೋಗ ನೀಡುವುದು ಮುಖ್ಯ. ಮಾತೆತ್ತಿದರೆ ಹತ್ತು ಕೆ.ಜಿ. ಅಕ್ಕಿ ಕೊಡುತ್ತೇವೆ ಎನ್ನುತ್ತಾರೆ. ಸರ್ಕಾರದ ಹಣದಲ್ಲಿ ಎಷ್ಟು ದಿನ ಭಿಕ್ಷುಕರನ್ನು ಸೃಷ್ಟಿಸುತ್ತಲೇ ಇರುತ್ತೀರಿ? ಜನರಿಗೆ ಶಾಶ್ವತವಾದ ಬದುಕುವ ದಾರಿ ತೋರಿಸಬೇಕಲ್ಲವೆ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.