ಕೇರಳ ಸರ್ಕಾರದ ಎಡವಟ್ಟಿನಿಂದ ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ: ಪ್ರಹ್ಲಾದ್ ಜೋಶಿ ಆರೋಪ
1 min read
ನವದೆಹಲಿ,ಜ.18-ಕೇರಳ ಸರ್ಕಾರದ ಎಡವಟ್ಟಿನಿಂದ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಶ್ರೀ ನಾರಾಯಣ ಗುರು ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರತಿ ಗಣರಾಜ್ಯೋತ್ಸವಕ್ಕೆ ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸೇರಿ ಒಟ್ಟು 12 ಸ್ತಬ್ಧ ಚಿತ್ರಗಳ ಆಯ್ಕೆ ಮಾಡಲಾಗುತ್ತದೆ. ಕೇಂದ್ರದ ಸ್ತಬ್ಧ ಚಿತ್ರದ ನಿಯಮಾವಳಿ ಹಾಗೂ ಮಾರ್ಗದರ್ಶಿಯನ್ನು ಕೇರಳ ಸರ್ಕಾರ ಸರಿಯಾಗಿ ಪಾಲಿಸದ ಕಾರಣವಾಗಿ ಕೇರಳದ ಸ್ತಬ್ಧ ಚಿತ್ರ ಆಯ್ಕೆಯಾಗಿಲ್ಲ ಎಂದು ತಿಳಿಸಿದ್ದಾರೆ.
2018 ಮತ್ತು 2021ರಲ್ಲಿ ಕೇರಳದ ಸ್ತಬ್ಧ ಚಿತ್ರಗಳ ಆಯ್ಕೆಯಾಗಿದ್ದವು. ಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ರಕ್ಷಣೆ ನೀಡಲಾಗದ ಕೇರಳದ ಕಮ್ಯುನಿಸ್ಟ್ ಸರಕಾರದ ಎಡವಟ್ಟಿನಿಂದ ಈ ಬಾರಿ ಸ್ತಬ್ಧ ಚಿತ್ರದ ಆಯ್ಕೆಯಾಗಿಲ್ಲ ಎಂದಿದ್ದಾರೆ.
ಅಲ್ಲದೆ, ಸಿದ್ದರಾಮಯ್ಯ ಅವರೇ ವಿನಾಕಾರಣ ನೀವು ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಿವಾದ ಸೃಷ್ಟಿಸುತ್ತಿರುವುದು ಖಂಡನೀಯ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.