ಶ್ರೀರಂಗಪಟ್ಟಣ ದಸರಾ: ಪಟಾಕಿ ಶಬ್ದಕ್ಕೆ ಬೆದರಿದ ಅಂಬಾರಿ ಹೊತ್ತಿದ್ದ ಗೋಪಾಲಸ್ವಾಮಿ; ತಪ್ಪಿದ ದುರಂತ
1 min read
ಶ್ರೀರಂಗಪಟ್ಟಣ,ಅ.9 – ಶ್ರೀರಂಗಪಟ್ಟಣ ದಸರಾ ಆಚರಣೆ ವೇಳೆ ದುರಂತವೊಂದು ತಪ್ಪಿದೆ. ಅಂಬಾರಿ ಹೊತ್ತಿದ್ದ ಗೋಪಾಲಸ್ವಾಮಿ ಆನೆ ಕೆಲ ಸಮಯ ವೈಲೆಂಟ್ ಆದ ಘಟನೆ ನಡೆದಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಮನೆ ಮಾಡಿತ್ತು.
ಕಿರಂಗೂರು ಬನ್ನಿಮಂಟಪದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಶ್ರೀರಂಗಪಟ್ಟಣ ದಸರಾಕ್ಕೆ ಚಾಲನೆ ನೀಡಿದರು.

ಗೋಪಾಲಸ್ವಾಮಿ ಆನೆಗೆ ಕಾವೇರಿ ಆನೆ ಸಾಥ್ ನೀಡಿತ್ತು. ಆದರೆ ಅಂಬಾರಿ ಹೊತ್ತ ಗೋಪಾಲಸ್ವಾಮಿ ಆನೆ ಪಟಾಕಿ ಹಾಗೂ ವಾದ್ಯಗಳ ಸದ್ದಿಗೆ ಬೆದರಿ ಹಿಂದಕ್ಕೆ ಸುತ್ತು ಹಾಕಿತು. ಗೋಪಾಲಸ್ವಾಮಿ ಆನೆ ವೈಲೆಂಟ್ ಆದಾಗ ಗಾಬರಿಗೊಂಡ ಜನರು ಓಡಿದರು. ಇದರಿಂದ ನೂಕುನುಗ್ಗಲು ಉಂಟಾಗಿ ಕೆಲವರು ಕೆಳಗೆ ಬಿದ್ದರು.
ಈ ವೇಳೆ ಮಾವುತರು, ಅರಣ್ಯ ಇಲಾಖೆ ಸಿಬ್ಬಂದಿ, ಆನೆ ವೈದ್ಯರ ಸಮಯ ಪ್ರಜ್ಞೆಯಿಂದಾಗಿ ಯಾವುದೇ ಅನಾಹುತ ಸಂಭವಿಸಲಿಲ್ಲ. ವಾದ್ಯ, ಧ್ವನಿವರ್ಧಕ ಬಂದ್ ಮಾಡಿದ ನಂತರ ಆನೆ ಸಮಾಧಾನಗೊಂಡಿತು. ಆದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಜಂಬೂಸವಾರಿಯನ್ನು ಸ್ಥಗಿತಗೊಳಿಸಲಾಯಿತು. ಅಂಬಾರಿಯಲ್ಲಿದ್ದ ದೇವಿ ವಿಗ್ರಹವನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮುಂದುವರಿಸಲಾಯಿತು. ಕಲಾತಂಡಗಳೊಂದಿಗೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಮೆರವಣಿಗೆ ರಂಗನಾಥಸ್ವಾಮಿ ದೇವಾಲಯದ ಆವರಣ ಪ್ರವೇಶಿಸಿತು.
ಮೈಸೂರಿನಲ್ಲಿ ಫಿರಂಗಿ ತಾಲೀಮಿನ ವೇಳೆಯಲ್ಲೂ ಆನೆ ಗೋಪಾಲಸ್ವಾಮಿ ಬೆದರಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಜಂಬೂಸವಾರಿ ಸ್ಥಗಿತಗೊಳಿಸಲಾಯಿತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದರು.