ಜಿಂಕೆ ಚರ್ಮ ಮಾರಾಟ ಮಾಡಲು ಯತ್ನ: ಮೂವರ ಬಂಧನ

1 min read

ಮೈಸೂರು,ಅ.23-ಜಿಂಕೆಯ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿರುವ ಅರಣ್ಯ ಇಲಾಖೆ ಪೊಲೀಸರು ಅವರಿಂದ ಜಿಂಕೆ ಚರ್ಮವನ್ನು ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಚಿತ್ತೂರು ಜಿಲ್ಲೆ ಪಲಮನೇರ್‌ ತಾಲೂಕು ಶಿಕಾರಿ ಕಾಲೋನಿಯ ಕುಟ್ಟಿಯಪ್ಪ ಬಿನ್ ಕಣಗಪರಂ, ವಿಜಯ್‌ಕಾಂತ್ ಬಿನ್ ದೇವರಾಜು, ಕಮಲ್ ಹಾಸನ್ ಬಿನ್ ಪರಶುರಾಮ್‌ ಬಂಧಿತ ಆರೋಪಿಗಳು.

ಮೈಸೂರು ಅರಣ್ಯ ಸಂಚಾರಿ ದಳ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಬಂದ ಖಚಿತ ಮಾಹಿತಿ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನಿರ್ದೇಶನದಲ್ಲಿ, ವಲಯ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ನಗರದ ಕ್ರಾಫರ್ಡ್ ಹಾಲ್ ವೃತ್ತದಿಂದ ಕುಕ್ಕರಹಳ್ಳಿ ಕೆರೆಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಜಿಂಕೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ್ದ ಮೂವರನ್ನು ಬಂಧಿಸಿ ಮೊಕದ್ದಮೆ ದಾಖಲು ಮಾಡಲಾಗಿದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಜಿಂಕೆ ಚರ್ಮವನ್ನು ಆರೋಪಿಗಳ ಊರಿನ ಪಕ್ಕದಲ್ಲಿರುವ ಕಾಡಿನಲ್ಲಿ ಬೇಟೆಯಾಡಿ ತಂದಿರುವರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದ್ದು, ಸದರಿ ಕೃತ್ಯವನ್ನು ಇತರೆ ಊರಿನವರೊಂದಿಗೆ ಸೇರಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆಂಧ್ರಪ್ರದೇಶದಿಂದ ಮೈಸೂರಿಗೆ ಹೇಗೆ ಸಾಗಟ ಮಾಡುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮನೋಹರ ಸುವರ್ಣ, ವಲಯ ಅರಣ್ಯಾಧಿಕಾರಿ ವಿವೇಕ್, ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್, ಡಿ.ಎಂ.ವಿನೋದ್‌ಕುಮಾರ್‌, ನಾಗರಾಜು, ಅನಿಲ್ ಕುಮಾರ್,  ಟಿ.ಸಿ.ಸ್ನೇಹ, ಕೆ.ಜೆ.ಮೇಘನ, ಅರಣ್ಯ ರಕ್ಷಕರಾದ ಮಾಹಾಂತೇಶ, ಕೋಟೇಶ ಪೂಜಾರ, ಚೆನ್ನಬಸವಯ್ಯ, ವಿರೂಪಾಕ್ಷ, ಉದಯ್ ಕುಮಾರ್, ಕುಮಾರ್‌, ಪ್ರಕಾಶ್, ದಿವಾಕರ್‌, ವಾಹನ ಚಾಲಕರಾದ ಮಧು, ಪುಟ್ಟಸ್ವಾಮಿ ಅವರು ಪ್ರಕರಣವನ್ನು ಭೇದಿಸಿದ್ದಾರೆ.

About Author

Leave a Reply

Your email address will not be published. Required fields are marked *