ಹಂಚ್ಯಾ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ: ಇಬ್ಬರಿಗೆ ಗಾಯ; ಆಸ್ಪತ್ರೆಗೆ ದಾಖಲು
1 min read
ಮೈಸೂರು,ಅ.2-ಹಾಡಹಗಲೇ ಎರಡು ಗುಂಪುಗಳ ನಡುವೆ ಮಾರಾಕಾಸ್ತ್ರಗಳಿಂದ ಮಾರಾಮಾರಿ ನಡೆದಿರುವ ಘಟನೆ ಮೈಸೂರು ನಗರದ ಹೊರವಲಯದಲ್ಲಿರುವ ಹಂಚ್ಯಾ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಯುವಕರು ಗಾಯಗೊಂಡಿದ್ದಾರೆ. ಹಲ್ಲೆಗೊಳಗಾದ ಯುವಕರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆ ವೈಷಮ್ಯದ ಹಿನ್ನೆಲೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹಂಚ್ಯಾ ಗ್ರಾಮಕ್ಕೆ ಪಕ್ಕದ ಗ್ರಾಮದ ರಮ್ಮನಹಳ್ಳಿಯ ಯುವಕರ ಗುಂಪೊಂದು ಚಾಕು, ಮಚ್ಚುಗಳನ್ನು ಹಿಡಿದು ನುಗ್ಗಿ ಹೋಟೆಲ್ನಲ್ಲಿ ಕುಳಿತಿದ್ದ ಕುಮಾರ್ ಹಾಗೂ ಪೈಲ್ವಾನ್ ನಂದೀಶ್ ಎಂಬುವರ ಮೇಲೆ ಹಲ್ಲೆ ಮಾಡಿದೆ. ಸ್ಥಳಕ್ಕೆ ಬಂದ ಹಂಚ್ಯಾ ಗ್ರಾಮಸ್ಥರು ಯುವಕರನ್ನು ಓಡಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಮ್ಮನಹಳ್ಳಿ ಉಪ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ರಾತ್ರಿ ಸಣ್ಣ ಗಲಾಟೆಯಾಗಿತ್ತು. ಈ ಕುರಿತು ದೂರು ನೀಡಲು ನಿರ್ಧರಿಸಿದ್ದೆವು. ಇದೇ ಕಾರಣಕ್ಕೆ ಇಂದು ಹೋಟೆಲ್ ನಲ್ಲಿ ಕುಳಿತಿದ್ದಾಗ ನಂದೀಶ್ ಗುರಾಯಿಸಿದ ಎಂಬ ಕಾರಣಕ್ಕೆ ಮಚ್ಚು ಮತ್ತು ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರು ಪರಿಚಯಸ್ಥರು ಎಂದು ಚಿಕಿತ್ಸೆ ಪಡೆಯುತ್ತಿರುವ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.