ವಿಧಾನಸಭೆ ಕಲಾಪ: ಮೈಸೂರು ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
1 min read
ಬೆಂಗಳೂರು/ಮೈಸೂರು,ಸೆ.22-ವಿಧಾನಸಭಾ ಕಲಾಪದಲ್ಲಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸದನದಲ್ಲಿ ಮಾತನಾಡಿದ ಅವರು, ಈ ಘಟನೆಯನ್ನು ದೆಹಲಿಯ ನಿರ್ಭಯಾ ಕೇಸ್ ನಂತೆ ಗಂಭೀರವಾಗಿ ಪರಿಗಣಿಸಬೇಕು. ಇಂತಹ ಗಂಭೀರ ಪ್ರಕರಣದಲ್ಲೂ.ಕೇಸ್ ದಾಖಲಿಸಲು ಪೊಲೀಸರು ಏಕೆ ತಡ ಮಾಡಿದರು? ಘಟನೆ ನಡೆದ 14 ರಿಂದ 15 ಗಂಟಗಳ ಬಳಿಕ ಎಫ್ ಐಆರ್ ದಾಖಲಾಗಿದೆ. ಪೊಲೀಸರು ಅನಗತ್ಯವಾಗಿ ತಡ ಮಾಡಿದ್ದು ಏಕೆ? ಹಾಗೆಯೇ ಯುವತಿಯ ಹೇಳಿಕೆಯನ್ನ ಕೂಡ ದಾಖಲಿಸಲಿಲ್ಲ ಎಂದು ಸರ್ಕಾರವನನ್ನ ತರಾಟೆಗೆ ತೆಗೆದುಕೊಂಡರು.
ಯುವತಿ ತನ್ನ ಸ್ನೇಹಿತನ ಜತೆ ವಾಯುವಿಹಾರಕ್ಕೆ ಅಲ್ಲಿಗೆ ಹೋಗಿದ್ದರು. ಆ ವೇಳೆ ಅತ್ಯಾಚಾರ ನಡೆದಿದೆ. ಮೈಸೂರು ಒಂದು ಸಾಂಸ್ಕೃತಿಕ ನಗರಿ. ಎಜುಕೇಷನ್ ಹಬ್ ಕೂಡ ಹೌದು. ಇಲ್ಲಿಗೆ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಇಂತಹ ನಗರದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದು ಪ್ರವಾಸಿಗರ ಮೇಲೆ ಪರಿಣಾಮ ಬೀರುತ್ತೆ. ಈ ಘಟನೆಯಿಂದ ಜನ ಭಯಭೀತರಾಗಿದ್ದಾರೆ. ಪೋಷಕರು ಆತಂಕಕ್ಕೊಳಗಾಗಿದ್ದಾರೆ. ನಾನು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೆ. ನಮ್ಮ ಕಾಂಗ್ರೆಸ್ ನಿಂದ ಸತ್ಯಶೋಧನಾ ಸಮಿತಿ ರಚಿಸಿದ್ದವು. ಅವರು ಅಲ್ಲಿಗೆ ಹೋಗಿ ಪರಿಶೀಲಿಸಿ ಕೆಲ ಪ್ರಶ್ನೆಗಳನ್ನ ಎತ್ತಿದ್ದಾರೆ ಎಂದರು.
ಅಲ್ಲದೆ ಸಂತ್ರಸ್ತ ಯುವತಿ, ಯುವಕನ ಮುಂದೆ ಆರೋಪಿಗಳ ಪರೇಡ್ ನಡೆಸಿಲ್ಲ. ಆರೋಪಿಗಳನ್ನ ಗುರುತಿಸುವ ಕೆಲಸ ಆಗಿಲ್ಲ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.