ವಿಜೃಂಭಣೆಯಿಂದ ಜರುಗಿದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ
1 min read
ಕೊಳ್ಳೇಗಾಲ: ಇಲ್ಲಿನ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಕಾವೇರಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಿ ಮೀನಾ ಲಗ್ನದಲ್ಲಿ ನಡೆದ ರಥೋತ್ಸವಕ್ಕೆ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು. ಬಳಿಕ ಮಂಗಳವಾದ್ಯದೊಂದಿಗೆ ರಾಜಬೀದಿಗಳಲ್ಲಿ ರಥೋತ್ಸವ ನಡೆಯಿತು. ಈವೇಳೆ ದಾಸರುಗಳು ಜಾಗಟೆ ಹಾಗೂ ಶಂಖ ನಾದ ಮೊಳಗಿಸಿದರು.

ಮಾಂಬಳ್ಳಿಯ ದಾಸರು ಪಾರ್ವತಿ ಸತ್ತಿಗೆಯನ್ನು ಪೂಜೆ ಸಲ್ಲಿಸಿ ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂದ್ದರು. ನೆರೆದಿದ್ದ ಭಕ್ತರು ಹರಕೆ ಹೊತ್ತು ಹಣ್ಣು ಜವನೆ ಎಸೆದರು. ನಂತರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಸ್ವೀಕರಿಸಿದರು. ರಥೋತ್ಸವದಲ್ಲಿ ಸೇವಾರ್ಥರು ಬಾಳೆ ಹಣ್ಣು, ಮಜ್ಜಿಗೆ, ಪಾನಕ ಹಾಗೂ ಕೊಸಂಬರಿಯನ್ನು ಭಕ್ತರಿಗೆ ವಿತರಿಸಿದರು. ಇಂದಿನ ಪೂಜಾ ಕಾರ್ಯವನ್ನು ದೇವಸ್ಥಾನದ ಪ್ರಧಾನ ಅರ್ಚಕರು ಶೇಷಾದ್ರಿ ಭಟ್ಟರು, ಸುದರ್ಶನ್ ನಡೆಸಿದರು.

ವೀರಾಂಜನೇಯಸ್ವಾಮಿ ದೇವಸ್ಥಾನದ ಅರ್ಚಕ ಟಿ.ವಿ.ಎಸ್.ರಾಘವನ್, ನಂದಕುಮಾರ್ ಹಾಗೂ ಇತರರು ಇದ್ದರು. ಈ ಸಂಧರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರು ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ಅಪರ ಪೊಲೀಸ್ ವರಿಷ್ಟಾಧಿಕಾರಿ ಶಶಿಧರ್, ತಹಶಿಲ್ದಾರ್ ಬಸವರಾಜು, ನಗರಸಭೆ ಪೌರಯುಕ್ತ ರುದ್ರಮ್ಮ ಶರಣಯ್ಯ, ಮಾಜಿ ಸದಸ್ಯರು, ಮುಖಂಡರು ಕಂದಹಳ್ಳಿ ನಂಜುಂಡಸ್ವಾಮಿ, ಕೊಪ್ಪಾಳಿ ಮಹದೇವ ನಾಯಕ ಹಾಗೂ ಇತರರು ಇದ್ದರು.
ರಥೋತ್ಸವದಲ್ಲಿ ಡಿವೈಎಸ್ಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.