ಮಗನ ಔಷಧಿಗೆ 280 ಕಿ.ಮೀ ಸೈಕಲ್ ತುಳಿದ ಅಪ್ಪ: ಮೈಸೂರು ಜಿಲ್ಲೆಯಲ್ಲಿ ಮನಕಲಕುವ ಘಟನೆ
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು ತಂದೆಯೊಬ್ಬರು ತನ್ನ ಮಗನ ಔಷಧಿಗೆ 280 ಕಿ.ಮೀ ಸೈಕಲ್ ತುಳಿದು ಹೋಗಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಗಾಣಿಗನಕೊಪ್ಪಲು ಗ್ರಾಮದಲ್ಲಿ ಘಟನೆ ನಡೆದಿದೆ. ಗಾರೆ ಕೆಲಸಗಾರ ಆನಂದ್ಅವರು ಮಗನಿಗಾಗಿ ಸತತ ನಾಲ್ಕು ದಿನಗಳು ಸೈಕಲ್ ತುಳಿದು ಔಷಧಿ ತಂದಿದ್ದಾರೆ.
ಮಾನಸಿಕ ವಿಶೇಷ ಚೇತನ ಮಗನಿಗೆ 10 ವರ್ಷಗಳಿಂದ ಮಾತ್ರೆ ಕೊಡಿಸಲಾಗುತ್ತಿದೆ. ಬೆಂಗಳೂರು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಔಷಧಿ ತರಲು ಲಾಕ್ಡೌನ್ ಅಡ್ಡಿ ಆಗಿತ್ತು. ಮಾತ್ರೆ ತಪ್ಪಿದರೆ 18 ವರ್ಷ ಮತ್ತೆ ಮಾತ್ರೆ ನೀಡಬೇಕಾದ ಆತಂಕ ಎದುರಾದ ಹಿನ್ನಲೆ 280 ಕಿ.ಮೀ ಹೋಗಿ ಔಷಧಿ ಖರೀದಿಸಿ ಬಂದಿದ್ದಾರೆ.

ಲಾಕ್ಡೌನ್ ಹಿನ್ನಲೆ ಬೈಕ್, ಆಟೋ ಹಾಗೂ ವಾಹನ ಸೌಲಭ್ಯ ಸಿಗದ ಹಿನ್ನೆಲೆ ತನ್ನ ಸೈಕಲ್ ತುಳಿದು ಮಗನಿಗೆ ಮಾತ್ರೆ ತಂದುಕೊಟ್ಟಿದ್ದಾರೆ. ಕಳೆದ ಭಾನುವಾರ ಗ್ರಾಮದಿಂದ ತೆರಳಿ ಕನಕಪುರದಲ್ಲಿ ತಂಗಿದ್ದರು. ನಂತರ ಅಲ್ಲಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಹೋಗಿ ಮಾತ್ರೆ ಪಡೆದಿದ್ದಾರೆ. ನಿತ್ಯ 70 ಕಿಲೋಮೀಟರ್ ಸೈಕಲ್ ತುಳಿದು ಬಂದಿದ್ದಾರೆ.
ನನಗೆ ಯಾರೂ ಬೈಕ್ ಕೊಡಲಿಲ್ಲ. ಒಂದು ದಿನ ಮಗನಿಗೆ ಮಾತ್ರೆ ತಪ್ಪಿಸಿದರೆ ತೊಂದರೆ ಆಗುತ್ತಿತ್ತು. ಮಗನಿಗೆ ಬೇಕಾದ ಮಾತ್ರೆ ಬೇರೆಲ್ಲೂ ಸಿಗುತ್ತಿರಲಿಲ್ಲ. ಹೀಗಾಗಿ ಸೈಕಲ್ನಲ್ಲಿಯೇ ಹೋಗಿ ಬಂದೆ ಎನ್ನುತ್ತಾರೆ ಆನಂದ್.