ಎನ್ ಟಿಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಇಮೇಲ್ ಚಳವಳಿ
1 min read
ಮೈಸೂರು,ಸೆ.25-ಎನ್ ಟಿಎಂ ಶಾಲೆ ಉಳಿಸುವಂತೆ ಒತ್ತಾಯಿಸಿ ಎನ್ ಟಿಎಂ ಶಾಲೆ ಉಳಿಸಿ ಹೋರಾಟ ಒಕ್ಕೂಟ ಇಂದು ಇಮೇಲ್ ಚಳವಳಿ ನಡೆಸಲಾಯಿತು.
ಶಾಲೆ ಉಳಿಸುವಂತೆ ಒತ್ತಾಯಿಸಿ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಸೇರಿ ಗಣ್ಯರು, ಚಿಂತಕರಿಗೆ ಇಮೇಲ್ ಮಾಡಿ ಮನವಿ ಮಾಡಲಾಯಿತು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಿ.ಎಸ್.ರಂಗಶೆಟ್ಟಿ ಅವರು ಇಮೇಲ್ ಚಳವಳಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಸರ್ಕಾರ ಏನಾದರೂ ತ್ಯಾಗ ಮಾಡಲಿ ಮಹಾರಾಣಿಯವರು ಸ್ಥಾಪಿಸಿರುವ ಎನ್ ಟಿಎಂ ಸರ್ಕಾರಿ ಶಾಲೆ ಉಳಿಸಬೇಕು. ಸರ್ಕಾರಕ್ಕೆ ಇದಕ್ಕಿಂತ ಮುಖ್ಯವಾದ ಕೆಲಸ ಯಾವುದೂ ಇಲ್ಲ ಎಂದು ತಿಳಿಸಿದರು.
ಹಿರಿಯ ಹೋರಾಟಗಾರ ಪ.ಮಲ್ಲೇಶ್ ಅವರು ಸೆ.27ರ ಭಾರತ್ ಬಂದ್ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಶಾಲೆ ಉಳಿವಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಇಮೇಲ್ ಮೂಲಕ ಗಣ್ಯರು, ಚಿಂತಕರಿಗೆ ಕನ್ನಡದ ಸರ್ಕಾರಿ ಶಾಲೆ ಇತಿಹಾಸ ತಿಳಿಸಿದ್ದೇವೆ. ಜತೆಗೆ ಶಾಲೆ ಉಳಿಸುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಹೈಕೋರ್ಟ್ ಆದೇಶ ರಾಮಕೃಷ್ಣ ಆಶ್ರಮದ ಪರವಿದೆ. ಅದೇ ಅಂತಿಮ ಅಲ್ಲ. ಸರ್ಕಾರವೇ ಕೊಟ್ಟಿರುವ ಜಾಗವನ್ನು ವಾಪಸ್ ಪಡೆದು ಶಾಲೆ ಉಳಿಸಬೇಕು ಎಂದು ಒತ್ತಾಯಿಸಿದರು.
ಶಾಲೆ ಉಳಿಸುವಂತೆ ಹೋರಾಟಗಾರರು, ಸಾಹಿತಿಗಳ ನಿಯೋಗದ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಶಾಲೆ, ನಿರಂಜನ ಮಠ ಉಳಿಸಿ ಸ್ಮಾರಕ ನಿರ್ಮಿಸಲು ರಾಜೀ ಸೂತ್ರ ಅನುಸರಿಸುವುದಾಗಿಯೂ ಭರವಸೆ ಕೊಟ್ಟಿದ್ದರು. ಅದನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಇಮೇಲ್ ಚಳವಳಿ ಏರ್ಪಡಿಸಿದ್ದರು. ಅಜಯ್ ಜೈನ್ ಸಹಕರಿಸಿದರು. ಸ.ರ.ಸುದರ್ಶನ, ಉಗ್ರನರಸಿಂಹೇಗೌಡ, ಕರ್ನಾಟಕ ಕಾವಲು ಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಎಲ್ಐಸಿ ಸಿದ್ದಪ್ಪ, ಗೋವಿಂದರಾಜು, ಎನ್.ಕೆ.ಕಾವೇರಿಯಮ್ಮ, ಮಾಲಿನಿ, ಪಾಲನೇತ್ರ, ಬೋಗಾದಿ ಸಿದ್ದೇಗೌಡ, ಚೌಹಳ್ಳಿ ಪುಟ್ಟಸ್ವಾಮಿ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಮುಂತಾದವರು ಭಾಗವಹಿಸಿದ್ದರು.