ದೇಶದಲ್ಲಿ ಕಾಂಗ್ರೆಸ್ ಗೆ ಭವಿಷ್ಯವಿಲ್ಲ:ಎಚ್.ಡಿ.ಕುಮಾರಸ್ವಾಮಿ

1 min read

ಬೆಂಗಳೂರು,ಅ.2-ಕಾಂಗ್ರೆಸ್ ಸಾಗುತ್ತಿರುವ ಹಾದಿಯನ್ನು ನೋಡಿದರೆ ದೇಶದಲ್ಲಿ ಕಾಂಗ್ರೆಸ್ಗೆ ಭವಿಷ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈಗ ಸಾಗುತ್ತಿರುವ ಹಾದಿಯನ್ನು ನೋಡಿದರೆ ಆ ಪಕ್ಷಕ್ಕೆ ರಾಜಕೀಯ ಭವಿಷ್ಯ ಉಳಿದಿಲ್ಲ ಎಂಬುದು ಮನವರಿಕೆಯಾಗುತ್ತದೆ ಎಂದರು.
ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಯನ್ನು ಕಾಂಗ್ರೆಸ್ ಪಡೆಯುವುದು ಕಷ್ಟ. ಮುಂದೆ ಪ್ರಾದೇಶಿಕ ಪಕ್ಷಗಳೇ ಬಿಜೆಪಿಗೆ ಪ್ರಬಲ ಎದುರಾಳಿಗಳಾಗಲಿವೆ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆಯೇ ಸ್ಪರ್ಧೆ ಇದರಲಿದೆ ಎಂದರು.
ಪಂಜಾಬ್ನಲ್ಲಿ ಕಾಂಗ್ರೆಸ್ ಪಕ್ಷ ಹೋಳಾಗಿದೆ. ಕರ್ನಾಟಕದಲ್ಲಿ ಒಂದಷ್ಟು ಶಕ್ತಿ ಇದೆ. ಆದರೆ, ವಿಧಾನಸಭಾ ಚುನಾವಣೆಗೆ ಇನ್ನೂ 18 ತಿಂಗಳಿದೆ. ರಾಜ್ಯ ಕಾಂಗ್ರೆಸ್ನಲ್ಲೂ ಆಂತರಿಕ ಸಂಘರ್ಷವಿದೆ. 18 ತಿಂಗಳಲ್ಲಿ ಇಲ್ಲಿಯೂ ಏನಾದರೂ ಆಗಬಹುದು. ನಮ್ಮ ಮನೆಗೆ (ಜೆಡಿಎಸ್) ಬೆಂಕಿ ಇಡಲು ಕಾಂಗ್ರೆಸ್ನವರು ಹೊರಟಿದ್ದಾರೆ. ಅವರ ಮನೆಗೇ (ಕಾಂಗ್ರೆಸ್) ಬೆಂಕಿ ಇಟ್ಟುಕೊಳ್ಳುತ್ತಾರೇನೋ? ಕಾದು ನೋಡೋಣ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ.ಒಕ್ಕಲಿಗ ಶಾಸಕರು, ಮುಖಂಡರನ್ನು ಸೆಳೆದ ಮಾತ್ರಕ್ಕೆ ಜೆಡಿಎಸ್ ಪಕ್ಷವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ, ರಮೇಶ್ ಕುಮಾರ್, ಪಿ.ಜಿ.ಆರ್ ಸಿಂಧ್ಯ ಸೇರಿದಂತೆ ಹಲವರು ಪಕ್ಷ ಬಿಟ್ಟು ಹೋದರೂ ಯಾವ ಪರಿಣಾಮವೂ ಆಗಿಲ್ಲ. ಹಿಂದೆ ನಮ್ಮ ಪಕ್ಷದ ಏಳು ಮಂದಿಯನ್ನು ಕರೆದೊಯ್ದ ಪಕ್ಷದ ಸ್ಥಿತಿ ಏನಾಯಿತು? 78 ಸ್ಥಾನಕ್ಕೆ ಕುಸಿಯಿತು. ಈಗಲೂ ಅದೇ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಪ್ರಯತ್ನ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ 38 ರಿಂದ 40 ಸ್ಥಾನಕ್ಕೆ ಕುಸಿಯಬಹುದು ಎಂದು ಹೇಳಿದರು.
ಈಗಲೂ ಜನರು ಎಚ್.ಡಿ. ದೇವೇಗೌಡರ ಪರವಾಗಿ ಇದ್ದಾರೆ. ತಾವು 123 ಸ್ಥಾನ ಪಡೆಯುವುದಾಗಿ ಹೇಳುತ್ತಿರುವುದು ಕನಸು ಕಾಣುತ್ತಿರುವುದಲ್ಲ. 30 ಸ್ಥಾನದಿಂದ 123ಕ್ಕೆ ಏರುವುದು ಕಷ್ಟವೇನೂ ಅಲ್ಲ ಎಂದರು.
ಜೆಡಿಎಸ್ ಬಗ್ಗೆ ಪ್ರೀತಿ ಇರುವ ಯುವ ಮುಖಂಡರು ಮತ್ತು ಕೆಲವು ಸಾಫ್ಟ್ವೇರ್ ಎಂಜಿನಿಯರ್ಗಳು ನನ್ನ ಜತೆ ಇದ್ದಾರೆ. ಬಾಡಿಗೆಗೆ ಯಾವುದೇ ಏಜೆನ್ಸಿಯನ್ನು ಪಡೆದಿಲ್ಲ. ಪಕ್ಷದ ಕುರಿತು ಪ್ರೀತಿ ಇರುವವರ ನೆರವಿನಲ್ಲಿ ಯೋಜನೆ ರೂಪಿಸಿ ಮುಂದಕ್ಕೆ ಸಾಗುತ್ತಿದ್ದೇನೆ. ದೆಹಲಿ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳ ಕುರಿತು ಅಧ್ಯಯನ ನಡೆಸಿದ್ದು, ನನ್ನದೇ ಒಂದು ಯೋಜನೆ ರೂಪಿಸುತ್ತಿದ್ದೇನೆ ಎಂದು ತಿಳಿಸಿದರು.

About Author

Leave a Reply

Your email address will not be published. Required fields are marked *