ಬೆಂಗಳೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

1 min read

ನೆಲಮಂಗಲ,ಅ.2-ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಮಾದನಾಯಕನಹಳ್ಳಿ ಸಮೀಪದ ಪ್ರಕೃತಿ ಬಡಾವಣೆಯಲ್ಲಿ ನಡೆದಿದೆ.
ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ವಸಂತ (40), ಮಗ ಯಶವಂತ್ (15), ಮಗಳು ನಿಶ್ಚಿತಾ (6) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರಿನ ಪಿರಿಯಾಪಟ್ಟಣ ಮೂಲದ ಈ ಕುಟುಂಬ, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು.
ಒಂದು ಕೊಠಡಿಯಲ್ಲಿ ವಸಂತ ಮತ್ತು ನಿಶ್ಚಿಕಾ ಮೃತದೇಹ ಕಂಡುಬಂದಿದ್ದರೆ, ಇನ್ನೊಂದು ಕೊಠಡಿಯಲ್ಲಿ ಯಶವಂತ್ ದೇಹ ಪತ್ತೆಯಾಗಿದೆ.
ವಸಂತ ಅವರು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾರಿಗೆ ಯಾರೂ ಇಲ್ಲ ಎನ್ನುವುದು ಗೊತ್ತಾಗಿದೆ. ನನ್ನ ಪತಿ ಇಲ್ಲದೆ ನಾನಿದ್ದರೂ ಸತ್ತಂತೆ, ಸಾಲ ಕೊಟ್ಟವರಿಗೆ ಮೋಸ ಆಗಬಾರದು ಎಂದು ಗಟ್ಟಿ ಮನಸ್ಸು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಸಾಲದ ಜತೆಗೆ ಮಕ್ಕಳ ಜವಾಬ್ದಾರಿ ಇತ್ತು. ಆದರೆ ಪತಿ ಇಲ್ಲದೆ ಬದುಕಲು ಆಗುತ್ತಿಲ್ಲ ಎಂದು ಅದರಲ್ಲಿ ಬರೆದಿದ್ದಾರೆ.
ಪೀಣ್ಯ ಡಿಪೋದಲ್ಲಿ ಬಿಎಂಟಿಸಿ ನಿರ್ವಾಹಕ-ಚಾಲಕರಾಗಿದ್ದ ಪ್ರಸನ್ನ ಕುಮಾರ್ ಅವರು ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ಪತ್ನಿ ವಸಂತ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಜತೆಗೆ ಗಂಡ ಹೆಂಡತಿ ಇಬ್ಬರೂ ಬ್ಯಾಂಕ್ ಮತ್ತು ಕೈಸಾಲಗಳನ್ನು ಮಾಡಿ ಕನಸಿನ ಮನೆ ಕಟ್ಟಿಸಿದ್ದರು. ಪತಿ ಸಾವಿನ ಬಳಿಕ ದಿಕ್ಕೆಟ್ಟ ವಸಂತ ಅವರಿಗೆ ಸಾಲ ತೀರಿಸುವ ಮತ್ತು ಮಕ್ಕಳನ್ನು ಬೆಳೆಸುವ ದಾರಿ ತೋಚದೆ ಕಂಗಾಲಾಗಿದ್ದರು. ಸಾಲ ತೀರಿಸಲು ಮನೆ ಮಾರಾಟ ಮಾಡಲು ವಸಂತ ಉದ್ದೇಶಿಸಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತಿ ಸಾವಿನ ಬಳಿಕ ಹತಾಶರಾಗಿದ್ದ ವಸಂತ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಸರಘಟ್ಟ ಕೆರೆಗೆ ಹಾರಲು ಮಕ್ಕಳೊಂದಿಗೆ ತೆರಳಿದ್ದ ಅವರನ್ನು ಸ್ಥಳೀಯರು ತಡೆದು ಬುದ್ಧಿಮಾತು ಹೇಳಿದ್ದರು. ಇನ್ನೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡುವುದಿಲ್ಲ ಎಂದು ಅವರು ಸಂಬಂಧಿಕರ ಮುಂದೆ ಹೇಳಿದ್ದರು ಎನ್ನಲಾಗಿದೆ.
ಸಹೋದರಿಗೆ ಧೈರ್ಯ ಇರಲಿ ಎಂದು ವಸಂತ ಅವರ ತಮ್ಮ ನಂದೀಶ್, ತಾಯಿ ತಾಯಮ್ಮ ಅವರನ್ನು ವಸಂತನ ಮನೆಯಲ್ಲಿಯೇ ಬಿಟ್ಟಿದ್ದರು. ಆದರೆ ತಾಯಮ್ಮ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರನ್ನು ನಂದೀಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.

About Author

Leave a Reply

Your email address will not be published. Required fields are marked *