ರಾಜ್ಯದಲ್ಲಿನ ಕಲ್ಲಿದ್ದಲು ಕೊರತೆ ನಿವಾರಿಸಲು ಕೇಂದ್ರದ ಜೊತೆ ಚರ್ಚೆ, ಪೂರೈಕೆ ಹೆಚ್ಚಿಸುವಂತೆ ಮನವಿ: ಸಿಎಂ ಬಸವರಾಜ ಬೊಮ್ಮಾಯಿ
1 min read
ಬೆಂಗಳೂರು,ಅ.10- ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕಲ್ಲಿದ್ದಲು ಕೊರತೆ ಬಗ್ಗೆ ಕೇಂದ್ರ ಸಚಿವರೊಂದಿಗೆ ಸಮಾಜಲೋಚನೆ ನಡೆಸಲಾಗಿದೆ. ರಾಜ್ಯಕ್ಕೆ ಎರಡು ಕಲ್ಲಿದ್ದಲು ಗಣಿಗಳು ಹಂಚಿಕೆಯಾಗಿದ್ದು, ಆದಷ್ಟು ಬೇಗ ಕಲ್ಲಿದ್ದಲು ಗಣಿ ಆರಂಭಿಸುವಂತೆ ಮನವಿ ಮಾಡಲಾಗಿದೆ ಎಂದರು.
ನಮಗಂತಲೇ ಗಣಿ ನಿಗದಿಯಾಗಿದೆ. ಓರಿಸ್ಸಾದ ಮಾನಂದಿ, ಚಂದ್ರಾಪುರ ಫಾರೆಸ್ಟ್ ಎರಡು ಕಡೆ ಅಲಾಟ್ ಆಗಿದೆ. ಚಂದ್ರಾಪುರದಲ್ಲಿ ಪತ್ರ ದೊರಕಿದ ಬಳಿಕ ಮಾಡುತ್ತೇವೆಂದು ಹೇಳಿದ್ದಾರೆ. ಅದು ಇನ್ನೊಂದು ವಾರದಲ್ಲಿ ಆಗಲಿದೆ. ಮಹಾನಂದಿ ಗಣಿ ಬೇರೆಯವರಿಗಿದ್ದದ್ದು, ನಮಗೆ ಕೊಟ್ಟಿದ್ದಾರೆ. ಅದರ ಬಗ್ಗೆ ಈಗಾಗಲೇ ಪರಿಶೀಲಿಸಲಾಗಿದೆ. ಇವೆರಡು ಮೈನ್ಸ್ ನಮಗಾದರೆ ಸ್ವಲ್ಪ ಖರ್ಚು ಕಡಿಮೆಯಾಗಲಿದೆ. ಬೇರೆಯವರ ಮೇಲೆ ಅವಲಂಬನೆ ಆಗೋದು ಕಡಿಮೆಯಾಗಲಿದೆ ಎಂದು ಹೇಳಿದರು.
ಬೆಂಗಳೂರು ಜಿಲ್ಲಾ ಉಸ್ತುವಾರಿ ವಿಚಾರಕ್ಕೆ ಸಂಬಂಸಿದಂತೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಒಟ್ಟಾಗಿ ಸಮಾಲೋಚಿಸಿ ಗೊಂದಲ ಬಗೆಹರಿಸುತ್ತೇವೆ. ಎಲ್ಲ ಸಲಹೆ ಪಡೆದು ಸೌಹಾರ್ದಯುತವಾಗಿ ಗೊಂದಲ ನಿವಾರಿಸಲಾಗುವುದು. ಉಪಚುನಾವಣೆ ನಡೆಯುತ್ತಿರುವುದರಿಂದ ಬೆಂಗಳೂರು ಶಾಸಕರ ಸಭೆಯನ್ನು ಕರೆದಿಲ್ಲ. ಆದರೆ ಶಾಸಕರು ನಿರಂತರ ಭೇಟಿ ಮಾಡಿ ಸಂಪರ್ಕದಲ್ಲಿದ್ದಾರೆ. ಬೆಂಗಳೂರು ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸೇರಿದಂತೆ ಎಲ್ಲವನ್ನು ಚರ್ಚಿಸಿದ ಬಳಿಕ ಬಗೆಹರಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಮೂಲೆ ಗುಂಪು ಮಾಡಲಾಗಿದೆ ಎಂದು ಕಾಂಗ್ರೆಸ್ನ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ಕಾಂಗ್ರೆಸ್ನವರು ಸಮಯಕ್ಕೆ ತಕ್ಕಂತೆ ಮಾತನಾಡುತ್ತಾರೆ. ಅವರಿಗೆ ರಾಜಕೀಯ ಕಾಮಾಲೆ ಇದ್ದು ಏನು ಮಾಡುತ್ತಿದ್ದೇವೆ ಎಂಬುದೇ ಅವರಿಗೆ ಗೊತ್ತಾಗುವುದಿಲ್ಲ. ಎಲ್ಲದರಲ್ಲೂ ರಾಜಕೀಯ ಮಾಡೋದು ಅವರ ಗುಣ. ಅವರ ಹೇಳಿಕೆ ನಮಗೆ ಮುಖ್ಯವಲ್ಲ ಎಂದು ಹೇಳಿದರು.
1-5ನೇ ತರಗತಿ ಶಾಲೆ ಆರಂಭ ವಿಚಾರಕ್ಕೆ ಪ್ರತಿಕ್ರಿಯಿಸಿದರ ಅವರು, ದಸರಾ ಬಳಿಕ ತಜ್ಞರ ಸಮಿತಿ ಜೊತೆ ಸಭೆ ಮಾಡುತ್ತೇನೆ. ಚರ್ಚೆ ಆದ ಬಳಿಕ ಏನು ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದರು.