ಕೌಟುಂಬಿಕ ಕಲಹ: ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಶರಣು
1 min read
ಮೈಸೂರು,ಅ.12- ಕೌಟುಂಬಿಕ ಕಲಹದಿಂದ ಮನನೊಂದು ಕಾನ್ ಸ್ಟೇಬಲ್ ವೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕು ಗೊದ್ದನಪುರದ ಹುಂಡಿಯಲ್ಲಿ ನಡೆದಿದೆ.
ಉತ್ತನಹಳ್ಳಿಯ ಬಳಿಯ ಏಳಿಗೆ ಹುಂಡಿ ನಿವಾಸಿ ಮಹೇಶ್ (34) ಆತ್ಮಹತ್ಯೆ ಮಾಡಿಕೊಂಡವರು. ಇವರು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಎಕ್ಸ್ಪೋರ್ಟ್ ಕಾರ್ಖಾನೆಯಲ್ಲಿ ಅಬಕಾರಿ ಇಲಾಖೆಯಿಂದ ಮೇಲ್ವಿಚಾರಣಾ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 15 ದಿನಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದು, ಅದನ್ನು ತನ್ನ ವಾಟ್ಸಪ್ ಡಿಪಿಯಲ್ಲಿ ಪ್ರಕಟಿಸಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿ ರಾತ್ರಿ 9.30ರ ಸುಮಾರಿಗೆ ರಾಂಪುರ ನಾಲೆಗೆ ಹಾರಿದ್ದಾರೆ. ಬೆಳಗಿನ ಜಾವ 3.30ರ ಸಮಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.