ಸರಳ, ಸಡಗರ, ಸಂಭ್ರಮದಿಂದ ಜರುಗಿದ ಚಾಮುಂಡೇಶ್ವರಿ ರಥೋತ್ಸವ
ಮೈಸೂರು: ಇಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸರಳ, ಸಡಗರ, ಸಂಭ್ರಮದಿಂದ ಚಾಮುಂಡೇಶ್ವರಿ ರಥೋತ್ಸವ ಜರುಗಿತು. ರಥೋತ್ಸವಕ್ಕೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.
ಮುಂಜಾನೆಯಿಂದಲೇ ಬೆಟ್ಟದಲ್ಲಿ ವಿವಿಧ ಅಭಿಷೇಕ, ಪೂಜಾ ಕೈಂಕರ್ಯ ನಡೆಯಿತು. ತಾಯಿ ಚಾಮುಂಡೇಶ್ವರಿಗೆ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ದೇವಾಲಯದ ತುಂಬೆಲ್ಲ ಪುಷ್ಪಾಲಂಕಾರ ಮಾಡಲಾಗಿತ್ತು. ರಾಜವಂಶಸ್ಥರು ವಿಶೇಷ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ ದಸರಾ ಬಳಿಕ ಬೆಟ್ಟದ ಜಾತ್ರೆ ನಡೆಯೋದು ವಾಡಿಕೆ. ಆದರೆ ದೊಡ್ಡ ತೇರಿನ ಬದಲು ಚಿಕ್ಕ ತೇರಿನಲ್ಲಿ ರಥೋತ್ಸವ ನಡೆಯಿತು. ಕರೊನಾ ಹಿನ್ನೆಲೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಏರಲಾಗಿತ್ತು. ಚಾಮುಂಡಿಬೆಟ್ಟದಲ್ಲಿ ಜನರಿಲ್ಲದ ಜಾತ್ರೆ ನಡೆಯಿತು. ದೇವಾಲಯದ ಒಳಾವರಣದಲ್ಲೇ ಮಂಟಪೋತ್ಸವ ಜರುಗಿತು.
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಶಾಸಕ ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.