ದಲಿತರು, ಬಡವರು, ಅಲ್ಪ ಸಂಖ್ಯಾತರು ಯಾವ ಕಾರಣಕ್ಕು ಬಿಜೆಪಿಗೆ ಹೋಗಬಾರದು: ಸಿದ್ದರಾಮಯ್ಯ
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ತವರೂರಾದ ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಸಮಾರಂಭಕ್ಕೆ ಕಹಳೆ ಊದಿ ಚಾಲನೆ ನೀಡಿದರು.
ಸಮಾರಂಭಕ್ಕೆ ಚಾಲನೆ ನೀಡಿದ ನಂತರ ಮಾತನಾಡಿ ಕಾಂಗ್ರೆಸ್ ಸದಸ್ಯತ್ವ ಪಡೆಯೋದು ಎಂದ್ರೆ ಒಂದು ಹೆಮ್ಮೆಯ ಸಂಗತಿ. ಕಾಂಗ್ರೆಸ್ಗೆ 135 ವರ್ಷಗಳ ಇತಿಹಾಸ ಇದೆ. ಡಾ.ಹ್ಯೂಮ್ ಎಂಬುವವರು 1885ರಲ್ಲಿ ಈ ಪಕ್ಷ ಸ್ಥಾಪನೆ ಆಯ್ತು. ಇದು ರಾಜಕೀಯಕ್ಕಾಗಿ ಮಾಡಿದ ಪಕ್ಷವಲ್ಲ. ಭಾರತೀಯ ನಾಗರೀಕರಿಗಾಗಿ ಉದಯಿಸಿದ ಪಕ್ಷವೇ ಕಾಂಗ್ರೆಸ್. ಅಲ್ಲಿಂದ ಇಲ್ಲಿಯವರೆಗು ಈ ಪಕ್ಷ ಬೆಳದು ಇಲ್ಲಿ ಬಂದು ನಿಂತಿದೆ. ಬಾಲಗಂಗಾಧರನಾಥ್ ತಿಲಕ್, ಗೋಖಲೆ, ವಲ್ಲಾಭಬಾಯಿ ಪಟೇಲ್, ಮಹಾತ್ಮ ಗಾಂಧೀಜಿ ಅವರು ಸೋನಿಯಾ ಗಾಂಧಿ ಅವರ ವರೆಗು ಇದರ ಅಧ್ಯಕ್ಷರಾದವರು ಎಂದು ಹೇಳಿದರು.
ಅಸ್ಪೃಶ್ಯತೆ ಅಂದರೆ ನಿಮಗೆ ಗೊತ್ತಾ?
ಅನ್ ಟಚಬೆಲ್ ಅಂದ್ರೆ ಈ ಅಸ್ಪೃಶ್ಯತೆ. ಬಾಬಾ ಸಾಹೆಬರು ಹೇಳ್ತಾರೆ ನಾನು ಬಹಳ ಪ್ರಯತ್ನ ಪಟ್ಟೆ. ಆದರೆ ಹಿಂದೂ ಧರ್ಮದಲ್ಲಿ ಬದಲಾಗಲೇ ಇಲ್ಲ. ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದ್ರು. ಮನುಸ್ಮೃತಿಯನ್ನು ಸುಟ್ಟು ಹಾಕಿದವರು ಬಾಬಾ ಸಾಹೇಬ್ ಅವರು. ದಲಿತರು, ಬಡವರು, ಅಲ್ಪ ಸಂಖ್ಯಾತರು ಯಾವ ಕಾರಣಕ್ಕು ಬಿಜೆಪಿಗೆ ಹೋಗಬಾರದು. ಅವರು ಕೊಟ್ಟ ಸಂವಿಧಾನ ಇವತ್ತು ಎಲ್ಲರಿಗು ಅನುಕೂಲ ಆಗಿದೆ. ಇದಕ್ಕೆ ಬಾಬಾ ಸಾಹೇಬರನ್ನ ಮಹಾನಾಯಕ ಅಂತ ಕರೆಯೋದು ಅಂತ ಹೇಳಿಕೆ ನೀಡಿದರು.
ನಾನು ಜೆಡಿಎಸ್ನಲ್ಲಿದ್ದಾಗ 59 ಸೀಟ್ ಗೆದ್ದಿದ್ವಿ:
ನಾನು ಜೆಡಿಎಸ್ನಲ್ಲಿದ್ದಾಗ 59 ಸೀಟ್ ಗೆದ್ದಿದ್ವಿ. ಈಗ ಬರ್ತಾ ಬರ್ತಾ ಕಡಿಮೆ ಆಗ್ತಾನೆ ಇದೆ. ಇವರ ಮೇಲೆ ಯಾರಿಗು ನಂಬಿಕೆಯೇ ಇಲ್ಲ. ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಳ್ತಾರೆ. ಈಗ ಇನ್ನು ಕೆಳಗೆ ಹೊರಟೋಗಿದೆ. ಜಾತ್ಯಾತೀತ ಪಕ್ಷ ಅಂದ್ರೆ ಬಿಜೆಪಿ ಜೊತೆ ಹೋಗೋದಾ.? ಇವರು ಇರೋದೆ ನಾಲ್ಕೈದು ಕಡೆಗಳಲ್ಲಿ. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ರೂರಲ್ ಅಷ್ಟೇ ಅಂತ ಮೈಸೂರಿನಲ್ಲಿ ಜೆಡಿಎಸ್ ಬಗ್ಗೆ ವಂಗ್ಯವಾಡಿದರು.
ದಿನ ದಿನ ರಾಜಕೀಯ ವ್ಯವಸ್ಥೆ ಕೆಡುತ್ತಿದೆ. ಪ್ರಜಾಪ್ರಭುತ್ವ ಉಳಿಬೇಕು, ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು. ನಮ್ಮದು ಅತೀ ಹೆಚ್ಚು ಜನರಿರುವ ದೇಶ. ಅದಕ್ಕೆ ಸಂವಿಧಾನ ಓದಬೇಕು, ಕಲಿಬೇಕು. ಇದಕ್ಕೆ ಕಾಂಗ್ರೆಸ್ ಪಕ್ಷ ಉಳಿಸಿ ಬೆಳೆಸಬೇಕು. ಐದು ರೂಪಾಯಿ ಕೊಟ್ಟು ಮೆಂಬರ್ ಆಗಿ. ಒಂದು ದಿನ ಕಾಫಿ ಕುಡಿಯೋದು ಬಿಟ್ಟು ಮೆಂಬರ್ ಆಗಿ. ಎಲ್ಲರು ಸದಸ್ಯರಾಗಿ ದೇಶ, ಸಂವಿಧಾನ, ಪ್ರಜಾಪ್ರಭುತ್ವ ಉಳಿಸೋಣ. ವೋಟು ಹಾಕೋದು ಯಾರು ತಪ್ಪಿಸಬಾರದು. ಅದಕ್ಕೆ ಮತದಾನ ಅಂತ ಹೇಳೋದು. ಮತ’ ದಾನ, ಇದು ನಿಮಗೆ ಕೊಟ್ಟಿರುವ ಹಕ್ಕು. ಸರಿಯಾದ ವ್ಯಕ್ತಿಗೆ ಮತ ಹಾಕಿ, ಒಳ್ಳೆ ವ್ಯಕ್ತಿ ಆಯ್ಕೆ ಮಾಡಿ ಅಂತ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.