ಚಾಮರಾಜನಗರ: ದೊಡ್ಡಾಣೆ ಗ್ರಾಮದಲ್ಲಿ 70 ಕ್ಕೂ ಹೆಚ್ಚು ಜನರಿಗೆ ಜ್ವರ; ಡಿಸಿ ಆದೇಶಕ್ಕೆ ಕ್ಯಾರೆ ಎನ್ನದ ಅಧಿಕಾರಿಗಳು
1 min read
ಚಾಮರಾಜನಗರ,ಜ.27-ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಳಿತ ಕಾಣುತ್ತಿದೆ. ಮೂರನೇ ಅಲೆ ಭೀತಿ ಇದೆ. ಈ ನಡುವೆ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ದೊಡ್ಡಾಣೆ ಗ್ರಾಮದಲ್ಲಿ 70 ಕ್ಕೂ ಹೆಚ್ಚು ಜನರಿಗೆ ಜ್ವರ ಕಾಣಿಸಿಕೊಂಡಿದೆ. ಇದು ಮತ್ತಷ್ಟು ಭೀತಿಗೆ ಕಾರಣವಾಗಿದೆ.

ದೊಡ್ಡಾಣೆ ಗ್ರಾಮದಲ್ಲಿ ಸಾಮೂಹಿಕವಾಗಿ ಜ್ವರ, ಶೀತ ತಲೆಬಾಧೆ, ಮೈ- ಕೈ ನೋವಿನಿಂದ ಗ್ರಾಮಸ್ಥರು ಬಳಲುತ್ತಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಗ್ರಾಮದಲ್ಲೇ ನರಳಾಡುತ್ತಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಡೋಲಿ ಕಟ್ಟಿಕೊಂಡು ಕಾಡಿನಲ್ಲಿ 11 ಕಿಲೋ ಮೀಟರ್ ಹೊತ್ತುಕೊಂಡು ಬರಬೇಕು. ಆದರೆ ಡೋಲಿ ಕಟ್ಟುವವರಿಗೂ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ 11 ಕಿಲೋಮೀಟರ್ ಕಾಡಿನಲ್ಲಿ ನಡೆಯಲಾಗದೆ ಗ್ರಾಮಸ್ಥರು ನರಳಾಡುತ್ತಿದ್ದಾರೆ.
ಇನ್ನು ಸುಳ್ವಾಡಿಗೆ ಚಿಕಿತ್ಸೆಗೆಂದು ಕಾಡಿನಲ್ಲಿ ಬರುವಾಗ ಮಹಿಳೆಯೊಬ್ಬರು ಸುಸ್ತಾಗಿ ದಾರಿಯಲ್ಲೇ ಮಲಗಿರುವ ಘಟನೆಯೂ ನಡೆದಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದರು ಇವರಿಗೆ ಕೊರೊನಾ ಟೆಸ್ಟೂ ಇಲ್ಲ, ಚಿಕಿತ್ಸೆಯು ಇಲ್ಲದಂತಾಗಿದೆ. ಗ್ರಾಮದ ಬಹುತೇಕ ಮಂದಿಗೆ ಎರಡನೇ ಡೋಸ್ ವ್ಯಾಕ್ಸಿನೇಷನ್ ಇನ್ನೂ ಆಗಿಲ್ಲ. ರೋಗ ಮತ್ತಷ್ಟು ಜನರಿಗೆ ಹಬ್ಬುವ ಸಾಧ್ಯತೆ ಹೆಚ್ಚಾಗಿದೆ.
ಜೀಪ್ ಮೂಲಕ ವೈದ್ಯರನ್ನು ಗ್ರಾಮಕ್ಕೆ ಕಳುಹಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.
ವಾಹನ ವ್ಯವಸ್ಥೆಗೆ ಡಿಸಿ ಆದೇಶ, ಕ್ಯಾರೆ ಎನ್ನದ ಅಧಿಕಾರಿಗಳು:
ಇನ್ನು ವಿಷಯ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಾಹನ ವ್ಯವಸ್ಥೆ ಮಾಡಿ ಅಂತ ಸೂಚನೆ ಕೊಟ್ಟಿದ್ದಾರೆ. ಆದರೂ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅಧಿಕಾರಿಗಳು ಈ ಕೂಡಲೇ ಗ್ರಾಮಸ್ಥರ ಚಿಕಿತ್ಸೆಗೆ ಕ್ರಮವಹಿಸಬೇಕಿದೆ. ಇಲ್ಲವಾದರೆ ಮತ್ತಷ್ಟು ಜನರಿಗೆ ಜ್ವರ, ಶೀತ, ಕೆಮ್ಮು ಹರಡಲಿದೆ.