ಗ್ಯಾಸ್ ಪೈಪ್ ಲೈನ್ ಅಳವಡಿಕೆ ಯೋಜನೆ ಬೆಂಬಲಿಸಿ ಸಹಿ ಸಂಗ್ರಹ ಅಭಿಯಾನ
1 min read
ಮೈಸೂರು,ಜ.31- ಕೇಂದ್ರ ಸರ್ಕಾರದ ಯೋಜನೆಯಾದ ಗ್ಯಾಸ್ ಪೈಪ್ ಲೈನ್ ಅಳವಡಿಸುವ ಯೋಜನೆಯನ್ನು ಬೆಂಬಲಿಸಿ ನಗರದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಮೈಸೂರಿನ ನಾಗರಿಕ ಹೋರಾಟ ಸಮಿತಿಯವರು ನಗರದ ಶ್ರೀ ಶಿವರಾತ್ರಿಶ್ವರ ವೃತ್ತದಲ್ಲಿ (ಗನ್ ಹೌಸ್) ಸಹಿ ಸಂಗ್ರಹ ಅಭಿಯಾನ ನಡೆಸಿ ನಾಗರಿಕರ ಸಹಿಗಳ ಪತ್ರವನ್ನು ನಗರಪಾಲಿಕೆ ಆಯುಕ್ತರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಮಡಿವಾಳ ಮಹೇಶ್ ಮಾತನಾಡಿ, ಇದು ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಭಾರತದಾದ್ಯಂತ ಇದನ್ನು ಕಾರ್ಯಗತ ಗೊಳಿಸಲು ಕೇಂದ್ರ ಸರ್ಕಾರ ಕ್ರಮವಹಿಸಿದ್ದು, ಪೈಲೆಟ್ ಪ್ರಾಜೆಕ್ಟ್ಆಗಿ ಈಗಾಗಲೇ ಈ ಯೋಜನೆಯು ಉತ್ತರ ಭಾರತದ ಹಲವು ನಗರಗಳಲ್ಲಿ ಹಾಗೂ ಕರ್ನಾಟಕದ ತುಮಕೂರಿನಲ್ಲಿ ಕಾಮಗಾರಿ ಮುಕ್ತಾಯ ಹಂತಕ್ಕೆ ತಲುಪಿದೆ. ಹಂತ ಹಂತವಾಗಿ ಮೈಸೂರು, ಹುಬ್ಬಳ್ಳಿ, ಧಾರವಾಡ ಹಾಗೂ ಇನ್ನಿತರ ಕಡೆಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಆದರೆ ಯೋಜನೆಯ ವಿಚಾರವಾಗಿ ಮೈಸೂರಿನ ಜನಪ್ರತಿನಿಧಿಗಳ ನಡುವೆ ವಾಕ್ಸಮರ ನಡೆಯುತ್ತಿದೆ. ಜನಪರ ಯೋಜನೆಯನ್ನು ಜನಪ್ರತಿನಿಧಿಗಳಾಗಿ ವಿರೋಧಿಸುವುದು ತಪ್ಪು. ಯೋಜನೆಯನ್ನು ಜಾರಿಗೆ ತರಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ವೇಳೆ ಆಟೋ ಚಾಲಕರ ಸಂಘದ ನಂಜುಂಡಸ್ವಾಮಿ, ಪ್ರಹ್ಲಾದ್, ಕೃಷ್ಣಪ್ರಸಾದ್, ಪಿಕೆಎಸ್ ರಾವ್, ವೈ.ಜಿ.ರಾವ್, ಹರಿಪ್ರಸಾದ್ ಇತರರು ಉಪಸ್ಥಿತರಿದ್ದರು.