‘ಕನ್ನಡದ ಕಬೀರ’ ಇಬ್ರಾಹಿಂ ಸುತಾರ ನಿಧನ: ಸಿಎಂ ಸೇರಿ ಗಣ್ಯರಿಂದ ಸಂತಾಪ
1 min read
ಬೆಂಗಳೂರು,ಫೆ.5-ನಾಡಿನ ಸಾಹಿತ್ಯ ಪರಂಪರೆಯಲ್ಲಿ ವಚನ, ಪ್ರವಚನ, ಸಮಾಜ ಸೇವೆಯ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ ‘ಕನ್ನಡದ ಕಬೀರ’ ಎಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತರಾದ ಇಬ್ರಾಹಿಂ ಸುತಾರ (82) ಅವರು ಇಂದು ನಿಧನರಾಗಿದ್ದಾರೆ.
ರಬಕವಿ ಬನಹಟ್ಟಿ ತಾಲೂಕಿನ ಮಹಲಿಂಗಪುರದ ತಮ್ಮ ನಿವಾಸದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭಾವೈಕ್ಯತೆಯ ಸಂತ
ಹಿಂದು-ಮುಸ್ಲಿಂರಲ್ಲಿ ಭಾವೈಕ್ಯತೆ ಬೆಸೆಯುವ ಕಾಯಕದಲ್ಲಿ ತೊಡಗಿದ್ದ ಇಬ್ರಾಹಿಂ ಸುತಾರ ಅವರು ಸಾಕಷ್ಟು ಕಡೆಗಳಲ್ಲಿ ತಮ್ಮ ಮಾತುಗಳ ಮೂಲಕ ಹೊಸ ಚೈತನ್ಯಕ್ಕೆ ಮುನ್ನುಡಿ ಬರೆದಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ:
ಸರ್ವಧರ್ಮ ಸಮನ್ವಯದ ಪ್ರವಚನಕಾರರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಇಂದು ಮುಂಜಾನೆ ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಮಾಜದಲ್ಲಿ ಸಾಮರಸ್ಯದ ಬೀಜ ಬಿತ್ತಲು ಶ್ರಮಿಸಿದ ಅವರ ದಿವ್ಯಾತ್ಮಕ್ಕೆ ದೇವರು ಶಾಂತಿ ನೀಡಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಕೋಟಾ ಶ್ರೀನಿವಾಸ್ ಪೂಜಾರಿ ಟ್ವೀಟ್ ಮಾಡಿ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ಕೇಳಿ ಬಹಳ ಬೇಸರವಾಯಿತು. ಧರ್ಮ ಧರ್ಮಗಳೊಂದಿಗೆ ಉತ್ತಮ ಬೆಸುಗೆ ಹೊಂದಲು ಅವರು ಪಟ್ಟ ಶ್ರಮ ಅನೇಕ. ಭಜನಾ ಕೀರ್ತನೆಗಳ ಮೂಲಕ ಭಾರತದ ಮೂಲತತ್ವದ ಪ್ರಚಾರ ಮಾಡುತ್ತಿದ್ದ ಸುತಾರ್ ತಾತನಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ, ಪದ್ಮಶ್ರೀ ಪುರಸ್ಕೃತರಾದ ಇಬ್ರಾಹಿಂ ಸುತಾರ ಇನ್ನಿಲ್ಲವೆಂಬುದು ತುಂಬಾ ನೋವಿನ ವಿಷಯ. ಶ್ರೀಯುತರ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ತಮ್ಮ ಜೀವನದುದ್ದಕ್ಕೂ ಜಾತಿ- ಮತ-ಪಂಥಗಳೆಲ್ಲಕ್ಕಿಂತ ಮನುಷ್ಯತ್ವ ,ಸಹೋದರತೆ ಸೌಹಾರ್ದತೆ ಮುಖ್ಯ ಎಂದು ಸಾರಿದ್ದರು ಎಂದು ಸಂತಾಪ ಸೂಚಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ವೇದ, ವಚನ ಮತ್ತು ಸೂಫಿ ಪರಂಪರೆ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಹಾಗೂ ಭಜನೆ, ಪ್ರವಚನಗಳಿಂದ “ಕನ್ನಡದ ಕಬೀರ” ಎಂದು ಹೆಸರುವಾಸಿಯಾಗಿದ್ದ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ್ ಅವರ ಅಗಲಿಕೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿದ್ದಾರೆ.