ಕೊಡಗಿಗೂ ಕಾಲಿಟ್ಟ ಹಿಜಾಬ್ ವಿವಾದ

1 min read

ಕೊಡಗು,ಫೆ.7-ಹಿಜಾಬ್ ವಿವಾದ ಉಡುಪಿಯ ಬಳಿಕ ಇದೀಗ ಕೊಡಗಿಗೂ ಕಾಲಿರಿಸಿದೆ.
ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದಲ್ಲಿ ತಮಗೂ ಕೇಸರಿ ಶಲ್ಯ ಧರಿಸಲು ಅವಕಾಶ ನೀಡಬೇಕೆಂದು ಹಿಂದೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.


ಅದರಂತೆ ಸೋಮವಾರ ಕೊಡಗಿನ ಮಡಿಕೇರಿ, ಶನಿವಾರಸಂತೆ ಮುಂತಾದ ಕಡೆಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ಕಾಲೇಜಿಗೆ ಆಗಮಿಸಿದರು.


ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಮೂವತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸಿ ‘ಜೈ ಶ್ರೀ ರಾಮ್’ ಘೋಷಣೆಯೊಂದಿಗೆ ಕಾಲೇಜು ಕ್ಯಾಂಪಸ್ ಪ್ರವೇಶಿಸಿದರು.


ಬಳಿಕ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾದ ವಿದ್ಯಾರ್ಥಿ ಮುಖಂಡರು, ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಿ ಬರಲು ಅವಕಾಶ ನೀಡಿದರೆ ತಮಗೆ ಕೇಸರಿ ಶಲ್ಯ ಧರಿಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಎಲ್ಲರಿಗೂ ಸಮವಸ್ತ್ರ ಕಡ್ಡಾಯಗೊಳಿಸಬೇಕು ಎಂದರು.


ಕಾಲೇಜು ಪ್ರಾಂಶುಪಾಲರು ಮಾತನಾಡಿ, ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಪ್ರಸಕ್ತ ಕಾಲೇಜಿಗೆ ಹಂತಹಂತವಾಗಿ ಸಮವಸ್ತ್ರ ಪೂರೈಕೆಯಾಗುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳಿಗೂ ಸಮವಸ್ತ್ರ ವಿತರಣೆಯಾದ ಬಳಿಕ ಎಲ್ಲರಿಗೂ ಸಮವಸ್ತ್ರ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು.


ಶನಿವಾರ ಸಂತೆಯಲ್ಲಿ ಕಾಲೇಜು ಪ್ರಾಂಶುಪಾಲರ ಕೋರಿಕೆ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಮುಸ್ಲಿಂ ವಿದ್ಯಾರ್ಥಿನಿಯರು‌ ಧರಿಸಿದ ಹಿಜಾಬ್ ಹಾಗೂ ಹಿಂದೂ ವಿದ್ಯಾರ್ಥಿಗಳು ಧರಿಸಿದ್ದ ಕೇಸರಿ ಶಲ್ಯಗಳನ್ನು ತೆಗೆಸಿ ತರಗತಿಗಳು ನಡೆಯುವಂತೆ ನೋಡಿಕೊಂಡರು.
ಹಿಜಾಬ್ ವಿಚಾರವಾಗಿ ರಾಜಕಾರಣಿಗಳ ನಡುವೆ ವಾಕ್ಸಮರ ಕೂಡ ನಡೆಯುತ್ತಿದೆ.

About Author

Leave a Reply

Your email address will not be published. Required fields are marked *