ಸುವ್ಯವಸ್ಥಿತ, ಯೋಜನಾಬದ್ಧವಾಗಿ ಬೆಂಗಳೂರನ್ನು ಬೆಳೆಸಬೇಕು: ಸಿಎಂ ಬೊಮ್ಮಾಯಿ
1 min read
ಬೆಂಗಳೂರು,ಫೆ. 16-ರಾಜಧಾನಿ ಬೆಂಗಳೂರನ್ನು ಸುವ್ಯವಸ್ಥಿತವಾಗಿ ಕಟ್ಟುವುದರ ಜೊತೆಗೆ ಯೋಜನಾಬದ್ಧವಾಗಿ ಬೆಳೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಔಟರ್ ರಿಂಗ್ ರಸ್ತೆಯ ತ್ರಿಪಥ ಮೇಲುಸೇತುವೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಶಿಕ್ಷಣ, ಆರೋಗ್ಯ ಮುಂತಾದ ಎಲ್ಲ ಅಗತ್ಯಗಳನ್ನು ನೋಡಿಕೊಳ್ಳುವ ಸುವ್ಯವಸ್ಥಿತ ಬೆಂಗಳೂರನ್ನು ಕಟ್ಟಬೇಕು. ನಗರವನ್ನು ಯೋಜನಾರಹಿತವಾಗಿ ಬೆಳೆಸುವುದನ್ನು ತಡೆದು ಯೋಜನಾಬದ್ಧವಾಗಿ ಬೆಳೆಸಬೇಕು ಎಂದರು.
ಬೆಂಗಳೂರಿನ ಗತ ವೈಭವವನ್ನು ನೆನೆಸುವ ಹಾಗೂ ಭವಿಷ್ಯದತ್ತ ದಾಪುಗಾಲು ಹಾಕುತ್ತಿರುವ ಬೆಂಗಳೂರು ನಿರ್ಮಿಸುವ ಕನಸು ನನ್ನದು. ಯಾವುದೇ ಮಾದರಿಯನ್ನು ನಾವು ಅನುಸರಿಸಬೇಕಿಲ್ಲ. ನಾವು ಮೂಲ ಜನ. ನಗರವನ್ನು ಯೋಜನಾರಹಿತವಾಗಿ ಬೆಳೆಸುವುದನ್ನು ತಡೆದು ಯೋಜನಾಬದ್ಧವಾಗಿ ಬೆಳೆಸಬೇಕು. ಎಲ್ಲಾ ಉತ್ತಮ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿರುವ , ಸಾರಿಗೆ ವ್ಯವಸ್ಥೆಗಳಿರಬೇಕು. ಇದು ದೊಡ್ಡ ಸವಾಲು. ಬೆಂಗಳೂರು ನಾಲ್ಕು ದಿಕ್ಕುಗಳಲ್ಲಿಯೂ ಬೆಳೆಯುತ್ತಿದೆ. ನಗರದಲ್ಲಿ ಅಡ್ಡವಾಗಿ ಬೆಳೆಯುತ್ತಿದ್ದು, ಅದರಿಂದ ಹೆಚ್ಚಿನ ಸವಾಲುಗಳನ್ನು ಎದುರಿಸಬೇಕಿದೆ ಎಂದು ಹೇಳಿದರು.
ಬೆಂಗಳೂರು ನಗರವನ್ನು ಮೂಲ ಬೆಂಗಳೂರಿನ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಅನೇಕ ಅಭಿಪ್ರಾಯಗಳು, ಮಾರ್ಗದರ್ಶನ ನಮಗೆ ಬೇಕಿದೆ. ಯೋಜನಾಬದ್ಧವಾದ, ಉತ್ತಮ ಭವಿಷ್ಯದ ಗುರಿ ಇರುವ ನಗರವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದರು.
ಬೆಂಗಳೂರಿಗೆ ಶ್ರೀಮಂತ ಇತಿಹಾಸ ಹಾಗೂ ಶ್ರೀಮಂತ ಸಂಸ್ಕೃತಿ ಇದೆ. ದೇಶದೆಲ್ಲೆಡೆಯಿಂದ ಬಂದು ನೆಲೆಸುವ ಜನರು ಈ ನಗರದ ಸಂಸ್ಕೃತಿಯನ್ನು ತಮ್ಮದಾಗಿಸಿಕೊಳ್ಳುವಂತಿರಬೇಕು. ಬೆಂಗಳೂರು ನಗರದಲ್ಲಿ ವಾಹನ ದಟ್ಟಣೆ ಒಂದು ಸವಾಲಾಗಿದೆ. ಫೆರಿಫೆರಲ್ ರಿಂಗ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಹೆಬ್ಬಾಳ ಫ್ಲೈಓವರ್ ನ್ನು ದೊಡ್ಡದು ಮಾಡುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಕೇಳಲಾಗಿದೆ. ಇದರಿಂದ ವಾಹನ ದಟ್ಟಣೆಯನ್ನು ಕಡಿಮೆಗೊಳಿಸಬಹುದಾಗಿದೆ. ಬಿಎಂಆರ್ ಸಿ ಎಲ್ ನಿಂದ ಹೆಬ್ಬಾಳ ದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಅಭಿವೃದ್ಧಿಗಾಗಿ 6 ಸಾವಿರ ಕೋಟಿ ರೂ.ಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಉತ್ತಮವಾದ ವಾಸಯೋಗ್ಯ ನಗರವಾಗಲಿದೆ. ಮುಂಬೈ, ಚೆನ್ನೈ, ಹೈದರಾಬಾದ್ ನಗರಗಳಿಗೆ ನೇರ ಸಂಪರ್ಕ ಒದಗಿಸುವ ಸಿಗ್ನಲ್ ರಹಿತ 12 ಕಾರಿಡಾರ್ ಗಳನ್ನು ನಿರ್ಮಿಸಲಾಗುವುದು. ಬೆಂಗಳೂರು ವಿಷನ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಐಟಿ ನಗರವಾಗಿರುವ ಬೆಂಗಳೂರು ಇನ್ನು ಮುಂದೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ನವೀಕೃತ ಇಂಧನ, ಸೆಮಿಕಂಡಕ್ಟರ್ ಸೇರಿದಂತೆ ಎಲ್ಲ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಂತಹ ನಗರವಾಗಬೇಕು.
183 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಿಂಗ್ ರಸ್ತೆ ಮತ್ತು ಮಾನ್ಯತಾ ಟೆಕ್ ಪಾರ್ಕ್ ನ ಫ್ಲೈಓವರ್ ವಾಹನ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸಲಿದೆ. ಖಾಸಗಿ ಸಂಸ್ಥೆಗಳ ಇಂತಹ ಉಪಕ್ರಮ ನಗರಕ್ಕೆ ಬಹಳ ಸಹಕಾರಿಯಾಗಿದೆ.ಈ ಯೋಜನೆಯನ್ನು ಕಾರ್ಯಗತಗೊಳಿಸಿದ ಎಂಬೆಸ್ಸಿ ಗ್ರೂಪ್ ಗೆ ಅಭಿನಂದಿಸಿದರು.