ನೈಪುಣ್ಯ ಶಾಲೆಯ ಬೇಸಿಗೆ ಬಂಡಿಯಲ್ಲಿ ಪತ್ರ ಸಂಸ್ಕೃತಿ
1 min read
ಮೈಸೂರು: ಆರ್.ಟಿ. ನಗರದ ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಆಯೋಜಿಸಿರುವ ‘ಬೇಸಿಗೆ ಬಂಡಿ ‘ಶಿಬಿರದಲ್ಲಿ ಭಾಗವಹಿಸಿರುವ ಮಕ್ಕಳಿಗೆ ಪತ್ರ ಸಂಸ್ಕೃತಿಯ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಅಂಚೆ ಸಂಸ್ಕೃತಿ ನಮ್ಮ ಬದುಕಿನ ಭಾಗವಾಗಿತ್ತು, ಸಂಬಂಧ-ವ್ಯವಹಾರಗಳ ಕೊಂಡಿಯಾಗಿತ್ತು, ಮಧುರ ಬಾಂಧವ್ಯಗಳ ಕುರುಹೂ ಆಗಿತ್ತು. ನೂರು ವರಷಗಳಿಗೂ ಹಿಂದೆ ಅಕ್ಷರದ ಅರಿವಿನಕೊರತೆಯ ನಡುವೆ ಊರಿಂದ ಊರಿಗೆ ,ಕುಟುಂಬ ದಿಂದ ಕುಟುಂಬಕ್ಕೆ ಬಳೆ ಮಾರುತ್ತಲ್ಲೇ ಸುದ್ದಿ ತುಲುಪಿಸಿ ಬಾಂಧವ್ಯ ಬೆಸೆಯುತ್ತಿದ್ದುದು ಬಳೆಗಾರ ಚೆನ್ನಯ್ಯ, ನಂತರದ ದಿನಗಳಲ್ಲಿ ಪತ್ರಗಳ ಸಂದೇಶದ ರಾಯಭಾರಿಯಂತೆ ‘ಓಲೆ ತಲುಪಿಸುವ ಅಂಚೆ ಅಣ್ಣ ‘ನಮ್ಮ ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವಾಗಿದ್ದನು. ತವರಿಗೆ ಪತ್ರ ಬರೆಯುವ, ದೂರದಲ್ಲಿರುವ ಮಗನಿಂದ ಬರುವ ಪತ್ರ, ಗಂಡನ ಸಂದೇಶ ಹೊತ್ತು ತರುವ ಪತ್ರ ,ಹೀಗೆ ಅಂಚೆ ಅಣ್ಣನ ( ಪೋಸ್ಚ ಮ್ಯಾನ್) ಬರುವಿಕೆಯನ್ನು ಕಾಯುವುದರಲ್ಲೇ ಒಂದು ಕುತೂಹಲ, ಖುಷಿ,ಪತ್ರ ನಿರೀಕ್ಷಿತರೆಲ್ಲರನ್ನೂ ಆವರಿಸುತ್ತಿತ್ತು, ಹಾಗೆಯೇ ಪತ್ರ ಬರೆದವರು ಮಾರುತ್ತರಕ್ಕಾಗಿ ಚಡಪಡಿಸುವ ಪರಿ ಸಾಮಾನ್ಯವಾಗಿತ್ತು.

ಮೊಬೈಲ್ ಪೋನ್ ಹೊತ್ತು ತಂದ ಆಧುನಿಕ ತಂತ್ರಜ್ಞಾನದ ಆಪೋಶನದ (ವಾಟ್ಸಾಪ್ , ಮೆಸೇಜ್ , ಮೇಲ್….) ನಡುವೆ ಈ ಪತ್ರ ಸಂಸ್ಕೃತಿಯ ಅವಲಂಬನೆ ಕ್ಷೀಣಿಸುತ್ತಿದೆ. ಏನೇ ತಂತ್ರಜ್ಞಾನ ಬಂದರೂ ನಮ್ಮ ಮಧುರ ಭಾವನೆಯ ಅನುಭವ ತಂತ್ರಜ್ಞಾನ ಎಂದಿಗೂ ನೀಡಲಾಗದು. ಈ ಹಿನ್ನಲೆಯಲ್ಲಿ ಭವಿಷ್ಯದ ಮಕ್ಕಳು ನಮ್ಮ ಸಂಸ್ಕೃತಿಯ ಮಹತ್ವ ಹಾಗೂ ಅನುಭವ ಪಡೆಯುವಂತಾಗಲೆಂಬ ಉದ್ದೇಶದಿಂದ ನೈಪುಣ್ಯ ಶಾಲೆಯ ಬೇಸಿಗೆ ಬಂಡಿ ಶಿಬಿರದಲ್ಲಿ ಮಕ್ಕಳಿಂದಲೇ ತಮ್ಮ ಬಂಧುಗಳಿಗೆ , ಸ್ನೇಹಿತರಿಗೆ ಪತ್ರ ಬರೆಸಿ ಅಂಚೆ ಕಚೇರಿಗೆ ತೆರಳಿ ಪತ್ರ ಸಂದೇಶ ರವಾನೆಯ ಅನುಭವ ಪಡೆಯುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.

ನಗರದ ಸರಸ್ವತಿ ಪುರಂ ಅಂಚೆ ಕಛೇರಿಯ ಪೋಸ್ಚ ಮಾಸ್ಟರ್ ಹಾಗೂ ಸಿಬ್ಬಂದಿ ಮಕ್ಕಳಿಗೆ ಅಂಚೆ ವ್ಯವಸ್ಥೆಯ ಕಾರ್ಯನಿರ್ವಹಣೆ ಹಾಗೂ ವಿಧಾನವನ್ನು ವಿಶೇಷ ಆಸಕ್ತಿ ವಹಿಸಿ ಹೇಳಿಕೊಟ್ಟರು. ಮಕ್ಕಳು ತಾವು ಬರೆದು ತಂದಿದ್ದ ಪತ್ರಗಳನ್ನು ಅಂಚೆ ಡಬ್ಬಿಗಳಿಗೆ ಹಾಕಿ ಪತ್ರ ಸಂಸ್ಕೃತಿಯ ಅನುಭವ ಹಂಚಿಕೊಂಡರು.
ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ನ ಪ್ರಿನ್ಸಿಪಾಲ್ ಶ್ರೀಮತಿ ಶಿಲ್ಪ ಹಾಗೂ ಇತರ ಶಿಕ್ಷಕ ಸಬ್ಬಂದಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.