ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದ ರಾಜ್ಯಪಾಲರು
1 min read
ತುಮಕೂರು: ತುಮಕೂರಿನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಿದ ನಂತರ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ್ ಶ್ರೀಗಳ ಗದ್ದುಗೆ ದರ್ಶನ ಪಡೆದರು.

ರಾಜ್ಯಪಾಲರು ಸಿದ್ಧಗಂಗಾ ಮಠಕ್ಕೆ ಆಗಮಿಸುತ್ತಿದ್ದಂತೆ, ಸಾಲಾಗಿ ಕುಳಿತಿದ್ದ ಮಕ್ಕಳು ಚಪ್ಪಾಳೆ ತಟ್ಟುವ ಮೂಲಕ ರಾಜ್ಯಪಾಲರಿಗೆ ಸ್ವಾಗತ ಕೋರಿದರು. ನಂತರ ಸಿದ್ಧಗಂಗಾ ಮಠದಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಶ್ರೀಗಳ ಗದ್ದುಗೆಗೆ ನಮಿಸಿ ಪೂಜೆ ಸಲ್ಲಿಸಿ ದರ್ಶನ ಪಡೆದರು.

“ನನ್ನ ಪ್ರೀತಿಯ ಮಕ್ಕಳೇ ತಮ್ಮೆಲರಿಗೂ ಶುಭಾಶಯಗಳು” ಎಂದು ರಾಜ್ಯಪಾಲರು ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ವಿದ್ಯಾರ್ಥಿಗಳು ಹರ್ಷೋದ್ಗಾರ ಮುಗಿಲು ಮುಟ್ಟಿತು, ನಂತರ ಹಿಂದಿಯಲ್ಲಿ ಮಾತುಗಳನ್ನು ಮುಂದುವರೆಸಿದ ಗೌರವಾನ್ವಿತ ರಾಜ್ಯಪಾಲರು, ಮಕ್ಕಳೇ ನೀವುಗಳೇ ನಮ್ಮ ದೇಶದ ಭವಿಷ್ಯ. ಭಾರತೀಯ ಸಂಸ್ಕೃತಿ, ಧರ್ಮ, ಶಿಸ್ತು ಅರಿತು ದೇಶದ ನಿರ್ಮಾಣದಲ್ಲಿ ಪಾಲುದಾರರಾಗಿ. ವಸುದೈವ ಕುಟುಂಬಕಂ ಎಂಬ ಭಾವನೆಯನ್ನು ಅರಿತು ನಾವೆಲ್ಲರೂ ಒಂದೇ ಎಂದು ಮುನ್ನುಗ್ಗಿ, ವಿಶ್ವಾದ್ಯಂತ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತರಾಗಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ಧಗಂಗಾ ಮಠದಲ್ಲಿ ಮಠಾಧೀಶರಾದ ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ, ಜಿಲ್ಲಾಧಿಕಾರಿ ಪಾಟೀಲ್ ಯಲಗೌಡ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.