ಬೆಂಗಳೂರು ಬ್ಲಾಸ್ಟರ್ಸ್‌ಗೆ ಮಣಿದ ಮೈಸೂರು ವಾರಿಯರ್ಸ್‌

1 min read

ಬೆಂಗಳೂರು: ಜಗದೀಶ ಸುಚಿತ್‌ ಅವರ ಆಲ್ರೌಂಡ್‌ ಆಟ (40ರನ್‌, 19ಕ್ಕೆ 2)ದ ನೆರವಿನಿಂದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮೈಸೂರು ವಾರಿಯರ್ಸ್‌ ವಿರುದ್ಧ 23 ರನ್‌ ಅಂತರದಲ್ಲಿ ಜಯ ಗಳಿಸಿದೆ.

158 ರನ್‌ ಜಯದ ಗುರಿ ಪಡೆದ ಮೈಸೂರು ಲಗುಬಗನೆ ವಿಕೆಟ್‌ ಕಳೆದುಕೊಂಡು ಸೋಲಿಗೆ ಶರಣಾಯಿತು. ತಂಡದ ಬೌಲಿಂಗ್‌ನಲ್ಲಿ ಮಿಂಚಿದ್ದ ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ನಲ್ಲೂ ತಾಳ್ಮೆಯ ಆಟವಾಡಿ 50 ರನ್‌ ಪೂರ್ಣಗೊಳಿಸಿದರು. ಬೆಂಗಳೂರು ಬ್ಲಾಸ್ಟರ್ಸ್‌ ಪರ ರಿಶಿ ಬೋಪಣ್ಣ (31ಕ್ಕೆ 3), ರೋನಿತ್‌ ಮೋರೆ (18ಕ್ಕೆ 2), ಸಂತೋಕ್‌ ಸಿಂಗ್‌ (23ಕ್ಕೆ 2) ಉತ್ತಮ ಬೌಲಿಂಗ್‌ ಪ್ರದರ್ಶಿಸಿ ಜಯಕ್ಕೆ ನೆರವಾದರು.

ಮೈಸೂರಿಗೆ 158 ಟಾರ್ಗೆಟ್‌:

ಜಗದೀಶ ಸುಚಿತ್‌ ಕೇವಲ 18 ಎಸೆತಗಳಲ್ಲಿ ಗಳಿಸಿದ 40 ರನ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. ಸ್ಪಿನ್‌ ಬೌಲರ್‌ ಬ್ಯಾಟಿಂಗ್‌ನಲ್ಲಿ ಮಿಂಚಿದ ಪರಿಣಾಮ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮೈಸೂರು ವಾರಿಯರ್ಸ್‌ ವಿರುದ್ಧ 157/6 ರನ್‌ ಗಳಿಸಿತು. ಎಲ್‌.ಆರ್‌. ಚೇತನ್‌ (29), ಮಯಾಂಕ್‌ ಅಗರ್ವಾಲ್‌ (31) ಹಾಗೂ ಅನೀಶ್‌ (23) ಸಾಧಾರಣ ಮೊತ್ತಕ್ಕೆ ತೃಪ್ತಿಪಡುವುದರೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್‌ 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 105 ರನ್‌ ಗಳಿಸಿತ್ತು. ಶ್ರೇಯಸ್‌ ಗೋಪಾಲ್‌ 19ರನ್‌ಗೆ 3 ವಿಕೆಟ್‌ ಗಳಿಸುವುದರೊಂದಿಗೆ ಮೈಸೂರು ಮೇಲುಗೈ ಸಾಧಿಸಿತ್ತು. ಆದರೆ ಪ್ರತೀಕ್‌ ಜೈನ್‌ ಎಸೆದ 17ನೇ ಓವರ್‌ನಲ್ಲಿ ಸುಚಿತ್‌ 17 ರನ್‌ ಗಳಿಸಿದರು. ವಿದ್ಯಾಧರ್‌ ಪಾಟೀಲ್‌ ಎಸೆದ 18ನೇ ಓವರ್‌ನಲ್ಲಿ 21 ರನ್‌ ದಾಖಲಿಸಿದರು. ಆದರೆ 19ನೇ ಓವರ್‌ನಲ್ಲಿ ಸುಚಿತ್‌ ವಿಕೆಟ್‌ ಕಳೆದುಕೊಂಡರು. ಅಷ್ಟರಲ್ಲೇ ತಂಡಕ್ಕೆ ಅಗತ್ಯವಿರು 40 ರನ್‌ ಸಿಡಿಸಿ ಅಚ್ಚರಿ ಮೂಡಿಸಿದ್ದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್‌ ಸೇರಿತ್ತು.

ಅನುಭವಿ ಸ್ಪಿನ್‌ ಬೌಲರ್‌ ಶ್ರೇಯಸ್‌ ಗೋಪಾಲ್‌ ಬೆಂಗಳೂರಿನ ಬೃಹತ್‌ ಮೊತ್ತ ಗಳಿಸುವ ಆಸೆಗೆ ಆರಂಭದಲ್ಲೇ ತಡೆಯೊಡ್ಡಿದರು. ಕೇವಲ 19 ರನ್‌ಗೆ ಅಮೂಲ್ಯ 3 ವಿಕೆಟ್‌ ಗಳಿಸುವ ಮೂಲಕ ಯಶಸ್ವಿ ಬೌಲರ್‌ ಎನಿಸಿದರು. ಉಳಿದಂತೆ ಪ್ರತೀಕ್‌ ಜೈನ್‌, ವಿದ್ಯಾಧರ ಪಾಟೀಲ್‌ ಹಾಗೂ ಶುಭಾಂಗ್‌ ಹೆಗ್ಡೆ ತಲಾ 1 ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌:

ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 157 (ಜೆ. ಸುಚಿತ್‌ 40, ಎಲ್‌ಆರ್‌ ಚೇತನ್‌ 29, ಮಯಾಂಕ್‌ ಅಗರ್ವಾಲ್‌ 31, ಅನೀಶ್‌ 23 ಶ್ರೇಯಸ್‌ ಗೋಪಾಲ್‌ 19ಕ್ಕೆ 3)

ಮೈಸೂರು ವಾರಿಯರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 134 (ಶ್ರೇಯಸ್‌ ಗೋಪಾಲ್‌ 50, ,ಜೆ, ಸುಚಿತ್‌ 19ಕ್ಕೆ 2, ರಿಶಿ ಬೋಪಣ್ಣ 31ಕ್ಕೆ 3, ರೋನಿತ್‌ ಮೋರೆ 18ಕ್ಕೆ 2, ಸಂತೋಕ್‌ ಸಿಂಗ್‌ 23ಕ್ಕೆ 2)

About Author

Leave a Reply

Your email address will not be published. Required fields are marked *