ಹಳಿ ತಪ್ಪಿದ ರೈಲು! ಪ್ರಯಾಣಿಕರ ರಕ್ಷಣೆಗೆ ಧಾವಿಸಿದ ರಕ್ಷಣಾ ಪಡೆ; ಹೀಗೊಂದು ರಕ್ಷಣಾ ಕಾರ್ಯಾಚರಣೆ
1 min read
ಮೈಸೂರು,ಸೆ.21-ನೋಡ ನೋಡುತ್ತಿದ್ದಂತೆ ಚಲಿಸುತ್ತಿದ್ದ ರೈಲು ಹಳಿ ತಪ್ಪಿತ್ತು. ರೈಲು ಬೋಗಿ ಹಳಿಯಿಂದ ಹೊರಬಿದ್ದಿತ್ತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಅವಘಡ ಸಂಭವಿಸಿ ಬಿಟ್ಟಿತ್ತು.
ಅಪಘಾತದಲ್ಲಿ ಗಾಯಗೊಂಡು ರಕ್ತಮಡುವಿನಲ್ಲಿದ್ದ ಪ್ರಯಾಣಿಕರು ರಕ್ಷಣೆಗಾಗಿ ಕಿರುಚುತ್ತಿದ್ದರು.
ಇದೆಲ್ಲವೂ ಕಂಡು ಬಂದಿದ್ದು, ನಗರದ ಅಶೋಕಪುರಂನಲ್ಲಿನ ರೈಲ್ವೆ ನಿಲ್ದಾಣದಲ್ಲಿ. ವಿಷಯ ತಿಳಿದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹಾಗೂ ರೈಲ್ವೆ ಪೊಲೀಸರು ಗಾಯಗೊಂಡವರ ರಕ್ಷಣೆಗೆ ಧಾವಿಸಿದ್ದರು.
ರೈಲು ಗಾಡಿ ಸಂ. 06220 ತಿರುಪತಿ-ಚಾಮರಾಜನಗರ ಎಕ್ಸ್ ಪ್ರೆಸ್ನ ಎರಡು ಸಾಮಾನ್ಯ ದ್ವಿತೀಯ ದರ್ಜೆ ಪ್ರಯಾಣಿಕರ ಬೋಗಿಗಳಾದ SWR 91604 ಮತ್ತು SWR 92665 ಇಂದು ಬೆಳಿಗ್ಗೆ 09:56 ಗಂಟೆ ಸುಮಾರಿಗೆ ಅಶೋಕಪುರಂ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿ ಹಳಿ ತಪ್ಪಿತ್ತು. ಎರಡು ಕೋಚ್ಗಳಲ್ಲಿ ಸುಮಾರು 15 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ವಿಷಯ ತಿಳಿದ ತಕ್ಷಣ ಹಿರಿಯ ವಿಭಾಗೀಯ ಸುರಕ್ಷಾ ಅಧಿಕಾರಿಯವರ ನೇರ ಮೇಲ್ವಿಚಾರಣೆಯಲ್ಲಿ ರೈಲ್ವೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ವಿರ್ವಹಣಾ ಪಡೆ, ಆಂಬ್ಯುಲೆನ್ಸ್, ಅಗ್ನಿಶಾಮಕ ದಳ, ನಾಗರಿಕ ಆಡಳಿತದ ಉನ್ನತ ಅಧಿಕಾರಿಗಳು ಮತ್ತು ಸರ್ಕಾರಿ ರೈಲ್ವೆ ಪೊಲೀಸ್ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡದೊಂದಿಗೆ ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅಣಕು ಕಾರ್ಯಾಚರಣೆಯನ್ನು ಹಮ್ಮಿಕೊಂಡಿತ್ತು.
ನೈಋತ್ಯ ರೈಲ್ವೆಯ ಮೈಸೂರು ವಿಭಾಗವು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ಸರ್ಕಾರದ ಸಿಬ್ಬಂದಿ ಸಹಯೋಗದೊಂದಿಗೆ, ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣದಲ್ಲಿ ಜಂಟಿ ಅಣಕು ಕವಾಯತು ನಡೆಸಿತ್ತು. ಈ ವೇಳೆ ರೈಲು ಹಳಿ ತಪ್ಪಿದ ಘಟನೆಯ ನಂತರದಲ್ಲಿ ಅದರಲ್ಲಿದ್ದ ಪ್ರಯಾಣಿಕರನ್ನು ರಕ್ಷಿಸುವಿಕೆ ಮತ್ತು ಪರಿಹಾರ ಪ್ರೇರಿತ ಕಾರ್ಯಾಚರಣೆಗಳು ನಡೆಯಿತು.
ನೈಋತ್ಯ ರೈಲ್ವೆ ಮೈಸೂರು ವಿಭಾಗದ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರ ಮತ್ತು ಇತರ ಹಿರಿಯ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ಸಂಪನ್ನವಾಯಿತು. ಈ ಅಣಕು ಪ್ರದರ್ಶನ ಸುಮಾರು 70 ನಿಮಿಷಗಳ ಕಾಲ ನಡೆದು11.40 ಗಂಟೆಗೆ ಪೂರ್ಣಗೊಂಡಿತು.
ಈ ಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ಮಾತನಾಡಿ ಆಗಿಂದಾಗ್ಗೆ ಈ ರೀತಿಯಾದ ಅಣಕು ವ್ಯಾಯಾಮಗಳನ್ನು ಏರ್ಪಡಿಸುವ ಮೂಲಕ ರೈಲ್ವೆ ಸಿಬ್ಬಂದಿಗಳು ನೈಸರ್ಗಿಕ ಅವಘಡಗಳು ಅಥವಾ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ತೋರಿಸುವ ಪ್ರಯತ್ನ ಇದಾಗಿದೆ ಎಂದರು.
ಜನರ ಜೀವವನ್ನು ರಕ್ಷಿಸುವ ಮತ್ತು ಕಾಪಾಡುವ ಮುಖ್ಯ ಉದ್ದೇಶ ರೈಲ್ವೆ ಇಲಾಖೆ ಹೊಂದಿದೆ ಎಂದು ಈ ಸಂದರ್ಭದಲ್ಲಿ ಮಾತನಾಡುತ್ತಾ ತಿಳಿಸಿದರು. ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ರೈಲ್ವೆ ಸಿಬ್ಬಂದಿಗಳು ಯಾವೆಲ್ಲಾ ಸಾಧನಗಳನ್ನು ಸಿದ್ಧಪಡಿಸಿಕೊಂಡಿರುತ್ತಾರೆ ಮತ್ತು ಹೇಗೆ ಅವುಗಳ ಬಳಕೆಯನ್ನು ಮಾಡಿಕೊಳ್ಳುತ್ತಾರೆ ಎಂಬುದನ್ನೂ ಸಹ ಈ ಮೂಲಕ ಜನರಿಗೆ ತಿಳಿಸುವ ಒಂದು ಪ್ರಯತ್ನವಾಗಿದೆ ಎಂದು ಹೇಳಿದರು.
ಇಂಥ ಸಂದರ್ಭಗಳು ಬಂದಾಗ ಮೈಸೂರಿನ ವಿಭಾಗೀಯ ರೈಲ್ವೆಯು ಇಂತಹ ಅವಘಡಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ವಿವರಿಸಿದರು. ಅಲ್ಲದೆ ಶೀಘ್ರ ಅಪಘಾತದ ಸ್ಥಳ ತುಲುಪುವಂತೆ ಸ್ವಯಂಚಾಲಿತ ರೈಲುಗಳನ್ನು ಸನ್ನದ್ಧ ಸ್ಥಿತಿಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಇರಿಸಲಾಗಿದ್ದು, ಹೊಸ ತಂತ್ರಜ್ಞಾನ ಹಾಗೂ ಜಿಲ್ಲಾಡಳಿತ ಮತ್ತು ಸಂಬಂಧಿಸಿದ ನಾಗರೀಕ ಸಂಸ್ಥೆಗಳ ಸಹಕಾರದೊಂದಿಗೆ ವಿಭಾಗವು ಎಂಥ ಕಠಿಣವಾದ ಅವಘಡಗಳು ಸಂಭವಿಸಿದರೂ ಎದುರಿಸಲು ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ ಎಂದು ತಿಳಿಸಿದರು.