ನಂದಿನಿ ನಕಲಿ ತುಪ್ಪ ಪತ್ತೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಚಿವ ಎಸ್ ಟಿ ಸೋಮಶೇಖರ್
1 min read
ಮೈಸೂರು: ನಂದಿನಿ ನಕಲಿ ತುಪ್ಪ ಪತ್ತೆ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕೆ ಎಂ ಎಫ್ ನ ಸಿಬ್ಬಂದಿಗಳು ಪ್ರಕರಣದಲ್ಲಿ ಭಾಗಿಯಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಅಂತ ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಕಲಿ ನಂದಿನಿ ತುಪ್ಪ ಪ್ರಕರಣ ಸಂಬಂಧ ಮಾಹಿತಿ ನೀಡಿದರು. ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಮತ್ಯಾರೆಲ್ಲಾ ಭಾಗಿಯಾಗಿದ್ದಾರೆಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಕಲಿ ನಂದಿನಿ ಉತ್ಪನ್ನಗಳನ್ನು ಪತ್ತೆ ಹಚ್ಚಲು 7 ಮಂದಿ ಸಮಿತಿ ರಚನೆ ಮಾಡಲಾಗಿದೆ. ನಿಗಧಿತ ಬೆಲೆಗಿಂತ ಕಡಿಮೆ ಬೆಲೆಗೆ ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ತಿಳಿದರೆ. ಆ ಸ್ಥಳಕ್ಕೆ ಹೋಗಿ ಸಮಿತಿಯ ಸದಸ್ಯರು ಪರಿಶೀಲನೆ ಮಾಡಲಿದ್ದಾರೆ ಎಂದರು.

ಸಂಶಯಾಸ್ಪದವಾಗಿ ದಾಸ್ತಾನು ಮಾಡಿದ ತುಪ್ಪವನ್ನ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಹೊಸಕೋಟೆ, ನೆಲಮಂಗಲದ ಮಾಕಳ್ಳಿ, ಜಯನಗರದಲ್ಲು ತುಪ್ಪವನ್ನ ವಶಪಡಿಸಿಕೊಳ್ಳಲಾಗಿದೆ. ಹೊಸ ಕೋಟೆಯಲ್ಲಿ 1728 ಲೀಟರ್ ತುಪ್ಪ.
ನೆಲಮಂಗಲದ ಮಾಕಳಿಯಲ್ಲಿ 6990 ಲೀಟರ್ ತುಪ್ಪ. ಜಯನಗರದ ಡಿಪಾರ್ಟ್ಮೆಂಟ್ ಸ್ಟೋರ್ ನಲ್ಲಿ ನಾಲ್ಕು ಲೀಟರ್ ತುಪ್ಪವನ್ನ ವಶಕ್ಕೆ ತೆಗೆದುಕೊಂಡು ಮಾದರಿಯನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ನಕಲಿ ತುಪ್ಪ ಮಾರಾಟ ಮಾಡಿದವರ ಮೇಲೆ ಬೆಂಗಳೂರು ಹಾಗೂ ತುಮಕೂರಿನಲ್ಲಿ ಪ್ರಕರಣ ದಾಖಲಾಗಿದೆ ಎಂದರು.
ನಂದಿನಿ ನಕಲಿ ತುಪ್ಪ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ತನಿಖೆಯ ಗೋಪ್ಯತೆ ಕಾಪಾಡಿಕೊಳ್ಳುವ ಸಲುವಾಗಿ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಅಧಿಕಾರಿ ಅಥವಾ ಸಿಬ್ಬಂದಿಗಳು ಭಾಗಿಯಾಗಿದ್ದರೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಂತ ಮೈಸೂರು ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಹೇಳಿಕೆ.