ಉತ್ತಮ ಗುಣಮಟ್ಟದೊಂದಿಗೆ ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಿ, ಮಾರ್ಕೆಟಿಂಗ್ ಹೆಚ್ಚಿಸಲು ಕಪಲ್ ಪ್ಯಾಕೇಜ್ ಕೊಡಿ: ಸಚಿವ ಡಾ.ಕೆ.ಸಿ ನಾರಾಯಣ ಗೌಡ
1 min read
ಮೈಸೂರು,ಅ.13-ಉತ್ತಮ ಗುಣಮಟ್ಟದೊಂದಿಗೆ ರೇಷ್ಮೆ ಸೀರೆಗಳ ಉತ್ಪಾದನೆ ಹೆಚ್ಚಿಸಲು ಕೆಎಸ್ಐಸಿ ಅಧಿಕಾರಿಗಳಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ಡಾ. ಕೆ.ಸಿ ನಾರಾಯಣ ಗೌಡ ಸೂಚಿಸಿದರು.
ಇಂದು ಮೈಸೂರಿನಲ್ಲಿರುವ ರೇಷ್ಮೆ ನೇಯ್ಗೆ ಕಾರ್ಖಾನೆಗೆ ಭೇಟಿ ನೀಡಿದ ನಾರಾಯಣ ಗೌಡ ಅವರು ಪರಿಶೀಲನೆ ನಡೆಸಿದರು. ಬಳಿಕ
ಮೈಸೂರು ರೇಷ್ಮೆ ನೇಯ್ಗೆ ಘಟಕ ಒಂದು ಮತ್ತು ಎರಡು ಹಾಗೂ ಚನ್ನಪಟ್ಟಣ ನೇಯ್ಗೆ ಘಟಕದ ಕುರಿತು ಪರಿಶೀಲನೆ ಸಭೆ ನಡೆಸಿದರು.
ಮೈಸೂರು ರೇಷ್ಮೆ ಸೀರೆಗಳ ಮಾರಾಟ ಹೆಚ್ಚಿಸಬೇಕು. ಮಹಿಳೆಯರು ಹೆಚ್ಚಾಗಿ ಆಕರ್ಷಿಸುವಂತಹ ವಿಶೇಷ ಡಿಸೈನ್ಗಳನ್ನು ಸಿದ್ದಪಡಿಸಿ ಎಂದು ಸೂಚನೆ ನೀಡಿದರು.
ರೇಷ್ಮೆ ವಸ್ತ್ರಗಳ ವಿಶೇಷ ಕಪಲ್ ಪ್ಯಾಕೇಜ್ ಆರಂಭ ಮಾಡಿದರೇ ಗ್ರಾಹಕರನ್ನ ಆಕರ್ಷಿಸಬಹುದು ಎಂದು ಸಲಹೆ ನೀಡಿದರು.
ಮಾರ್ಕೆಟಿಂಗ್ ಸ್ಟ್ರಾಟಜಿಯನ್ನು ಬದಲಿಸಿ. ಹೆಚ್ಚಿನ ದರದ ಸೀರೆ ಖರೀದಿಸುವವರಿಗೆ ಸೂಟ್ಕೇಸ್, ಸ್ಪೇಷಲ್ ಬ್ಯಾಗ್ಗಳನ್ನು ನೀಡುವ ಮೂಲಕ ಗ್ರಾಹಕರ ಆಕರ್ಷಿಸುವಂತಹ ಯೋಜನೆಗಳನ್ನು ರೂಪಿಸಿ ಎಂದರು.
ಬೆಂಗಳೂರು, ಮುಂಬೈ, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮೈಸೂರು ಸಿಲ್ಕ್ ಮಳಿಗೆ ತೆರೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಂಡು, ಶೀಘ್ರದಲ್ಲೇ ಮಳಿಗೆಗಳನ್ನು ಆರಂಭಿಸಲು ಸಚಿವರು ಸೂಚಿಸಿದರು.
ದೆಹಲಿಯಲ್ಲಿ ಕೆಚ್ಡಿಸಿಗೆ ಸೇರಿದ ಜಾಗವನ್ನ ಪಡೆದು ಅಲ್ಲಿ ರೇಷ್ಮೆ ಮಳಿಗೆ ಆರಂಭಿಸಲು ಕೆಎಸ್ಐಸಿ ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಸೂಚಿಸಿದರು.
ಕೆಎಸ್ಐಸಿ ಘಟಕಗಳಲ್ಲಿ ರೇಷ್ಮೆ ಸೀರೆಗಳ ಉತ್ಪಾದನೆ ಹೆಚ್ಚಿಸಬೇಕು. ಅದಕ್ಕೆ ಅಗತ್ಯವಿರುವ ಹೆಚ್ಚಿನ ಲೂಮ್ಗಳನ್ನ ಅಳವಡಿಸಿ, ಮೈಸೂರು ಘಟಕ 2ರಲ್ಲಿ ಎರಡನೇ ಪಾಳಿಯನ್ನು (ಸೆಕೆಂಡ್ ಶಿಫ್ಟ್) ಆರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಅಗತ್ಯವಿರುವ ಸಿಬ್ಬಂದಿಯನ್ನು ತಕ್ಷಣವೇ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಚಿವ ನಾರಾಯಣ ಗೌಡ ಅವರು ಸೂಚಿಸಿದರು.
ರೇಷ್ಮೆ ಇಲಾಖೆಯಲ್ಲಿ 150 ಅನುಪಯುಕ್ತ ಪವರ್ ಲೂಮ್ಗಳಿದ್ದು, ಅವುಗಳನ್ನು ದುರಸ್ಥಿ ಮಾಡಿಸಿ ಅಗತ್ಯ ಇರುವ ಚನ್ನಪಟ್ಟಣ, ಮೈಸೂರು ಘಟಕಗಳಲ್ಲಿ ಅಳವಡಿಸಿ ಉತ್ಪಾದನೆ ಹೆಚ್ಚಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವ ನಾರಾಯಣಗೌಡ ಅವರು ಸೂಚಿಸಿದರು.
ಮೈಸೂರು ನೇಯ್ಗೆ ಕಾರ್ಖಾನೆಯಲ್ಲಿ ವಿದ್ಯುತ್ ಖರೀದಿಗೆ ಸುಮಾರು ಐದು ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ. ಇದನ್ನ ತಪ್ಪಿಸಲು ಕಾರ್ಖಾನೆಯ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನಲ್ ಅಳವಡಿಸಲು ಸಚಿವ ನಾರಾಯಣ ಗೌಡ ಅವರು ಸೂಚಿಸಿದರು. 500 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸುಮಾರು ಎರಡು ಕೋಟಿ ವೆಚ್ಚವಾಗಲಿದೆ. ಎರಡು ತಿಂಗಳಲ್ಲಿ ಸೋಲರ್ ಪ್ಯಾನಲ್ ಅಳವಡಿಕೆಗೆ ಅಗತ್ಯ ಕ್ರಮಕೈಗೊಳ್ಳಲು ಸಚಿವರು ಸೂಚಿಸಿದರು.
ಕೆಎಸ್ಐಸಿ ಅಧ್ಯಕ್ಷರಾದ ಎಸ್. ಆರ್.ಗೌಡ, ಕೆಎಸ್ಎಂಡಿ ಅಧ್ಯಕ್ಷರಾದ ಸವಿತಾ ಶೆಟ್ಟಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.