ಎಚ್.ಡಿ.ಕೋಟೆಯಲ್ಲಿ ವಿಶ್ವ ಸೆರಿಬ್ರಲ್ ಪಾಲ್ಸಿ ದಿನ ಆಚರಣೆ

1 min read

ಎಚ್.ಡಿ.ಕೋಟೆ,ಅ.23- ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‌ ವತಿಯಿಂದ ಎಚ್.ಡಿ.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ವಿಶ್ವ ಸೆರಿಬ್ರಲ್ ಪಾಲ್ಸಿ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸೆರಿಬ್ರಲ್ ಪಾಲ್ಸಿಯಿಂದ ಬಳಲುತ್ತಿರುವ ಬೆಂಳೂರಿನ ಪ್ರತಿಷ್ಠಿತ ಕಂಪನಿ ಉದ್ಯೋಗಿ ಪ್ರಶಾಂತ್‌ ಮಾತನಾಡಿ, ವಿಶೇಷ ಚೇತರನ್ನು ಕಂಡಾಗ ಅಯ್ಯೋ ಪಾಪ ಎಂದು ಅನುಕಂಪದಿಂದ ನೋಡಬೇಡಿ. ಅವರಿಗೂ ಸಾಧಿಸಲು ಅವಕಾಶ ನೀಡಿ ಎಂದರು.

ನಾನು ಜನಿಸಿದಾಗ 5-6ನಿಮಿಷ ಆಮ್ಲಜನಕ ಸರಬರಾಜಾಗದ ಹಿನ್ನೆಲೆಯಲ್ಲಿ ನನ್ನ ಎರಡು ಕಾಲುಗಳು ಮತ್ತು ತಲೆ ನಿಯಂತ್ರದದಲ್ಲಿಲ್ಲ. ಸ್ಪಷ್ಟವಾಗಿ ಮಾತನಾಡಲೂ ಸಾಧ್ಯವಾಗುತ್ತಿಲ್ಲ. ವೈದ್ಯರು ನಾನು ಎರಡು ವರ್ಷ ಮಾತ್ರ ಬದುಕುತ್ತೇನೆ ಎಂದಿದ್ದರು. ಜೋತಿಷಿ ಬಳಿ ಜಾತಕ ತೋರಿಸಿದಾಗ 18 ವರ್ಷಕ್ಕಿಂತ ಹೆಚ್ಚು ನಾನು ಬದುಕೋಲ್ಲ ಎಂದಿದ್ದರು. ಆದರೆ ನನಗೀಗ 46 ವರ್ಷ ನಾನು ಬದಿಕಿದ್ದೇನೆ ನನ್ನ ಭವಿಷ್ಯ ನುಡಿದವರು ಬದುಕಿದ್ದಾರೋ ಇಲ್ಲವೋ ತಿಳಿದಿಲ್ಲ. ಹಾಗಾಗಿ ಜಾತಕ ಮೂಢನಂಬಿಕೆ ನಂಬದೇ ದುಡಿಮೆ ನಂಬಿ ಬದುಕಿ ಎಂದರು.

ಈಗ ನಾನು ಪ್ರತಿಷ್ಟಿತ ಕಂಪನಿಯ ಉದ್ಯೋಗಿ ನನ್ನ ಕಾಲಮೇಲೆ ನಾನು ನಿಂತು ಜೀವನ ನಡೆಸುತ್ತಿದ್ದೇನೆ. ವಿಶೇಷ ಚೇತನರಿಗೆ ಸಾಮಾನ್ಯರಂತೆ ಶಿಕ್ಷಣ ಕೊಡಿಸಿ ಎಂದು ತೊದಲು ಭಾಷೆಯಲ್ಲಿ ಹೇಳಿದರು. ಆಗ ಪ್ರಶಾಂತ್ ಸಹೋದರಿ ಅಶ್ವಿನಿ ಸಹೋದರನ ಮಾತನ್ನು ಸರಿಯಾಗಿ ಸಭಿಕರಿಗೆ ತಿಳಿಸಿದರು.

ಪ್ರಶಾಂತ್ ಅವರ ಸಾಧನೆಗೆ ಗೌರ್ನರ್ ಪ್ರಶಸ್ತಿ ಕೂಡ ಲಭಿಸಿದ್ದು, ಸಾಧನೆಗೆ ವಿಕಲತೆ ತಡೆಯಾಗಯವುದಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಕಾರ್ಯಕ್ರಮ ವ್ಯವಸ್ಥಾಪಕ ಎಂ.ಪಿ.ರಮೇಶ್ ಮಾತನಾಡಿ, ವಿವೇಕಾನಂದ ಯೂತ್ ಮೂವ್ ಮೆಂಟ್ ಕಳೆದ 37ವರ್ಷಗಳಿಂದ ಆದಿವಾಸಿಗರು ವಿಶೇಷ ಚೇತನರ ಹಾರೈಕೆ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಸಬಲೀಕರಣಕ್ಕೆ ಅದ್ಯತೆ ನೀಡುತ್ತಿದೆ. ಇಂದಿನ ಸಮಾರಂಭದಲ್ಲಿ ವಿಶೇಷ ಚೇತನ ಮಕ್ಕಳ ಸಾಧನ ಸಲಕರಣೆಗೆ ಪೂರಕವಾಗಿ ತಪಾಸಣೆ ನಡೆಸಿ ನಂತರದ ದಿನಗಳಲ್ಲಿ ಸಾಧನ ಸಲಕರಣೆ ನೀಡುವ ಭರವಸೆ ನೀಡಿದ ಅವರು ವಿಶೇಷ ಚೇತನರು ಯೋಜನೆಯ ಉಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸಮಾರಂಭದಲ್ಲಿ ತಾಲೂಕಿನ ವಿಶೇಷ ಚೇತನ ಮಕ್ಕಳು ಪಾಲ್ಗೊಂಡಿದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ರೇಖಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಯ ರವಿ, ತಾಲೂಕು ವಿಶೇಷ ಚೇತನರ ಸಂಘದ ಅಧ್ಯಕ್ಷ ಮಹದೇವಯ್ಯ ಮೊದಲಾದವರಿದ್ದರು. ಸಮಾರಂಭದ ಬಳಿಕ ವಿಶೇಷ ಚೇತನರ ತಪಾಸಣೆ ನಡೆಸಿ ಬೇಕಾದ ಸಾಧನ ಸಲಕರಣೆ ಪಟ್ಟಿ ಸಿದ್ದಪಡಿಸಿಕೊಂಡರು.

About Author

Leave a Reply

Your email address will not be published. Required fields are marked *