ಕೇಂದ್ರ ಬಜೆಟ್ ‘ಅಮೃತ ಕಾಲ’ಕ್ಕೆ ನೀಲನಕ್ಷೆ ಒದಗಿಸಲಿದೆ: ನಿರ್ಮಲಾ ಸೀತಾರಾಮನ್
1 min read
ನವದೆಹಲಿ,ಫೆ.1-ಪ್ರಸಕ್ತ ಬಜೆಟ್ ‘ಅಮೃತ ಕಾಲ’ಕ್ಕೆ ನೀಲನಕ್ಷೆ ಒದಗಿಸಲಿದ್ದು, ಮುಂದಿನ 25 ವರ್ಷಗಳಲ್ಲಿ ದೇಶ ಮುನ್ನಡೆಬೇಕಾದ ಹಾದಿಯನ್ನು ಸದೃಢಗೊಳಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
‘ಅಮೃತ ಕಾಲ’ ಯೋಜನೆಯನ್ವಯ ಮುಂದಿನ 25 ವರ್ಷಗಳ ಆರ್ಥಿಕ ಮುನ್ನೋಟಕ್ಕೆ ಅನುಗುಣವಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಎಲ್ಲಾ ವಲಯಗಳ ಪ್ರಗತಿಗಾಗಿ ನೀಲನಕ್ಷೆ ಸಿದ್ಧವಾಗಿದ್ದು, ಈ ನಿಟ್ಟಿನಲ್ಲಿ ಧೈರ್ಯವಾಗಿ ಹೆಜ್ಜೆ ಇಡುತ್ತೇವೆ ಎಂದು ಭರವಸೆ ನೀಡಿದರು.
ಕೃಷಿ ವಲಯ, ಕೈಗಾರಿಕೆ ವಲಯ, ಮಹಿಳಾ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ, ಸಾರಿಗೆ ವಲಯ, ಶಿಕ್ಷಣ ವಲಯ ಹೀಗೆ ವಿವಿಧ ವಲಯಗಳ ಅಭಿವೃದ್ಧಿಗಾಗಿ ‘ಅಮೃತ ಕಾಲ’ ಯೋಜನೆಯನ್ವಯ ಹಾಕಿಕೊಂಡಿರುವ ನೀಲನಕ್ಷೆಗೆ ಅನುಗುಣವಾಗಿ ಶ್ರಮವಹಿಸಲಾಗುವುದು ಎಂದು ಹೇಳಿದರು.
75ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಿಲ್ಲಿರುವ ಭಾರತ 100ನೇ ಸ್ವಾತಂತ್ರ್ಯ ಸಂಭ್ರಮದ ವೇಳೆಗೆ ತಲುಪಬೇಕಾದ ಗುರಿಯನ್ನು ನಾವು ಈಗಿನಿಂದಲೇ ನಿರ್ಧರಿಸಲಿದ್ದೇವೆ ಎಂದ ಅವರು, ರೈಲ್ವೇ ವಲದಯದ ಅಭಿವೃದ್ಧಿಗಾಗಿ ಕೈಗೊಂಡಿರುವ ಯೋಜನೆಗಳು ಮತ್ತು ಮಂಜೂರು ಮಾಡಿದ ಅನುದಾನಗಳ ಕುರಿತು ಮಾಹಿತಿ ನೀಡಿದರು.
ಪ್ರಮುಖವಾಗಿ ಮುಂದಿನ 3 ವರ್ಷಗಳಲ್ಲಿ ಉತ್ತಮ ದಕ್ಷತೆಯ 400 ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ತರಲಾಗುವುದು ಎಂದು ಹೇಳಿದರು.
100 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳನ್ನು ಮುಂದಿನ 3 ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಮೆಟ್ರೋ ವ್ಯವಸ್ಥೆಗಳನ್ನು ನಿರ್ಮಿಸಲು ನವೀನ ಮಾರ್ಗಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.