ಫೆ.14 ಕ್ಕೆ ಸ್ಪಷ್ಟ ನಿರ್ಧಾರ ಕೈಗೊಳ್ಳುವೆ, ಮೈಸೂರಿಗೆ ಯಾರ ವಿರುದ್ಧವೂ ಬಂದಿಲ್ಲ: ಸಿಎಂ ಇಬ್ರಾಹಿಂ
1 min read
ಮೈಸೂರು,ಫೆ.2-ವಿಧಾನ ಪರಿಷತ್ ನಲ್ಲಿ ನನಗೆ 21 ಜನರ ಬೆಂಬಲ ಇತ್ತು. ಆದರೆ ರಾತ್ರೋ ರಾತ್ರಿ ನನ್ನ ಹೆಸರು ಬದಲಾಯಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಯಾರು ನನ್ನ ಹೆಸರು ತಪ್ಪಿಸಿದರು ಅಂತ ಅವರೇ ಹೇಳಲಿ ಎಂದು ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಆಯ್ಕೆ ಮಾಡುತ್ತಾರೋ ಚುನಾಯಿತರಾಗುತ್ತಾರೋ? ಎಂದು ಪ್ರಶ್ನಿಸಿದರು.
ಫೆ.14ಕ್ಕೆ ಸ್ಪಷ್ಟ ನಿರ್ಧಾರ:
ಅಖಿಲೇಶ್ ಯಾದವ್ ಮಮತ ಬ್ಯಾನರ್ಜಿ ಸೇರಿ ಹಲವರು ಸಂಪರ್ಕದಲ್ಲಿದ್ದಾರೆ. ರಣಕಹಳೆ ಶಂಖ ಊದುತ್ತಿದ್ದೇನೆ 95ರಲ್ಲಿ ಆದ ಗತಿ 2023ಕ್ಕೂ ಆಗುತ್ತದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಸ್ಡಿಪಿಐ ಸೇರಿ ಎಲ್ಲಾ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ಫೆಬ್ರವರಿ 14ಕ್ಕೆ ಸ್ಪಷ್ಟ ನಿರ್ಧಾರ ತಿಳಿಸುತ್ತೇನೆ ಎಂದರು.
ಗುಲ್ಬರ್ಗಾ ರಾಯಚೂರಿನಿಂದ ನನಗೆ ಬೆಂಬಲವಿದೆ. ಅಲ್ಲಿಂದ ಅಲ್ಪಸಂಖ್ಯಾತ ಲಿಂಗಾಯತ, ಒಕ್ಕಲಿಗರನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಈ ಮೂಲಕ ಮುಂದಿನ ದಿನದಲ್ಲಿ ಅಧಕಾರ ಹಿಡಿಯುತ್ತೇವೆ ಎಂದರು.
ಮುಂದುವರಿದು ಮಾತನಾಡಿದ ಅವರು, ಇಂದು ನಾನು ಮೈಸೂರಿಗೆ ನಾನು ಯಾರ ವಿರುದ್ದವೂ ಬಂದಿಲ್ಲ. ಸುತ್ತೂರು ಶ್ರೀ ಹಾಗೂ ಸಂಸದರಾದ ಶ್ರೀನಿವಾಸ್ ಪ್ರಸಾದ್, ಎಂಎಲ್ಸಿ ವಿಶ್ವನಾಥ್ ಅವರನ್ನು ಭೇಟಿ ಮಾಡುತ್ತೇನೆ.
ಸಾಬ್ರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗ್ತಾರಾ? ಎಂಬ ವಿಚಾರವಾಗಿ ಮಾತನಾಡಿದ ಅವರು, ಮುಸ್ಲಿಂ ಧರ್ಮ ಗುರುಗಳು ಕಾಂಗ್ರೆಸ್ ವಿರುದ್ದ ಆಗಿದ್ದಾರೆ. ನಮಗೆ ಸ್ಥಾನನೂ ಇಲ್ಲ ಬಜೆಟ್ನಲ್ಲಿ ದುಡ್ಡು ಇಲ್ಲ. ದಲಿತರಿಗೆ ಕೊಡ್ತಾರೆ ಮುಸ್ಲಿಂರಿಗೆ ಕೊಡಲ್ಲ. ಸಿದ್ದರಾಮಯ್ಯ ಹಿಂದೆ ಸಿಎಂ ಆದಾಗ ನಾನು, ವಿಶ್ವನಾಥ್, ರಮೇಶ್ ಸಲಹೆ ಕೊಟ್ಟಿದ್ದೇವು. ಅನ್ನಭಾಗ್ಯ, ಕ್ಷೀರಭಾಗ್ಯ, ಹಿಂದುಳಿದ ದಲಿತರ ಸಾಲ ಮನ್ನಾ ನಮ್ಮದು. ನಾವು ಹಿನ್ನೆಲೆ ಗಾಯಕರಾಗಿದ್ದೆವು.
ಇವರನ್ನು ಪರದೆ ಮೇಲೆ ಇಟ್ಟಿದ್ದೇವು. ಆದರೆ ನಿರಂತರವಾಗಿ ನಮ್ಮ ಕುತ್ತಿಗೆ ಕುಯ್ದರು ಎಂದು ಕಿಡಿಕಾರಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಚುನಾವಣೆ ಉಲ್ಲೇಖಿಸಿದ ಸಿಎಂ ಇಬ್ರಾಹಿಂ ಅವರು, ನೀವು ರಾಜೀನಾಮೆ ನೀಡಿದ್ದರೆ ರಾಜ್ಯದಲ್ಲಿ ಹೀರೋ ಆಗುತ್ತಿದ್ದೀರಿ. ಅದರ ಬದಲು ಯು.ಟಿ. ಖಾದರ್ಗೆ ಉಪ ನಾಯಕ ಮಾಡಿದಿರಿ. ಈಗಲಾದರೂ ನಿಮ್ಮ ತಪ್ಪನ್ನು ನೀವು ಅರ್ಥ ಮಾಡಿಕೊಳ್ಳಿ ಎಂದರು.
ಇವತ್ತಿನಿಂದ ರಾಜ್ಯದಾದ್ಯಂತ ಪ್ರವಾಸ ಆರಂಭಿಸಿದ್ದೇನೆ. ತನ್ವೀರ್ ಸೇಠ್ನ್ನು ವಿರೋಧ ಪಕ್ಷದ ನಾಯಕ ಮಾಡಿ, ಯು. ಟಿ.ಖಾದರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಮಾಡಿ, ಟಿಪ್ಪು ಸುಲ್ತಾನ್ ಹುಟ್ಟಿದ ಭೂಮಿಯಲ್ಲಿ ನಾವು ಹುಟ್ಟಿರೋದು ಎಂದರು.