ಮುಡಾಗೆ ಸೇರಿದ 3 ಕೋಟಿ ರೂ. ಮೌಲ್ಯದ ಜಾಗದಲ್ಲಿನ ಅನಧಿಕೃತ ತಂತಿ ಬೇಲಿ ತೆರವು, ವಶಕ್ಕೆ
ಮೈಸೂರು, ಸೆ.19-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 3ಕೋಟಿ ರೂ. ಮೌಲ್ಯದ 27 ಗುಂಟೆ ಜಾಗದಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ತಂತಿ ಬೇಲಿಯನ್ನು ಇಂದು ತೆರವುಗೊಳಿಸಿ ಜಾಗವನ್ನು ಪ್ರಾಧಿಕಾರದ ವಶಕ್ಕೆ ಪಡಿಸಿಕೊಳ್ಳಲಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿ ದೇವನೂರು ಸರ್ವೆ ನಂ.168/2 ರಲ್ಲಿ ಪ್ರಾಧಿಕಾರದಿಂದ ದೇವನೂರು 3ನೇ ಹಂತ ಬಡಾವಣೆಯನ್ನು ನಿರ್ಮಿಸಲಾಗಿದ್ದು ಈ ಪೈಕಿ 3 ಕೋಟಿ ರೂ. ಮೌಲ್ಯದ 27 ಗುಂಟೆ ಜಮೀನಿನಲ್ಲಿ ನಾಗರಾಜು ಬಿನ್ ಬಸವಯ್ಯ ಎಂಬವರು ಅನಧಿಕೃತವಾಗಿ ತಂತಿ ಬೇಲಿ ಅಳವಡಿಸಿಕೊಂಡಿದ್ದರು. ಪ್ರಾಧಿಕಾರದ ಆಯುಕ್ತರಾದ ಡಾ.ಡಿ.ಬಿ.ನಟೇಶ್ ನಿರ್ದೇಶನದಂತೆ ಸದರಿ ಜಾಗದಲ್ಲಿ ಅಳವಡಿಸಿದ್ದ ತಂತಿ ಬೇಲಿಯನ್ನು ತೆರವುಗೊಳಿಸಿ ಜಾಗವನ್ನು ಪ್ರಾಧಿಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ವಲಯಾಧಿಕಾರಿ ಹೆಚ್.ಪಿ.ಶಿವಣ್ಣ, ಸಹಾಯಕ ಅಭಿಯಂತರರಾದ ರಾಜಶೇಖರ್, ಸಿಬ್ಬಂದಿ ಇದ್ದರು.