ಮಲಂಬುಳ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಿದ ಭಾರತೀಯ ಸೇನೆ

1 min read

ಕೇರಳ,ಫೆ.10-ಕೇರಳದ ಪಾಲಕ್ಕಾಡ್ ಬಳಿಯ ಮಲಂಬುಳದ ಕಡಿದಾದ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ಭಾರತೀಯ ಸೇನೆಯು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಮಲಂಬುಳದ ಬಾಬು (23) ಪಾರದ ಯುವಕ. ಬಾಬು ಸೋಮವಾರ ಮೂವರು ಸ್ನೇಹಿತರ ಜೊತೆಗೆ
ಮಲಂಬುಳದ ಕಡಿದಾದ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದನು. ಈ ವೇಳೆ ಕಾಲು ಜಾರಿ ಬೆಟ್ಟದ ಬಂಡೆಕಲ್ಲಿನ ನಡುವೆ ಸಿಲುಕಿಕೊಂಡಿದ್ದ. ಸುಮಾರು 1,000 ಮೀಟರ್ ಎತ್ತರದ ಬೆಟ್ಟ ಇದಾಗಿದೆ.

ಕಳೆದೆರಡು ದಿನಗಳಿಂದ ನೀರು, ಆಹಾರ ಇಲ್ಲದೆ ಪರದಾಡುತ್ತಿದ್ದ ಯುವಕನನ್ನು ಭಾರತೀಯ ಸೇನೆಯು ಬುಧವಾರ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುವ ಪ್ರಯತ್ನ ಪ್ರತಿಕೂಲ ಹವಾಮಾನದಿಂದಾಗಿ ವಿಫಲಗೊಂಡಿತ್ತು. ಅಲ್ಲದೆ ಡ್ರೋನ್ ಮೂಲಕ ಯುವಕನಿಗೆ ಆಹಾರ ತಲುಪಿಸುವ ಪ್ರಯತ್ನ ವಿಫಲಗೊಂಡಿತ್ತು. ಅಂತಿಮವಾಗಿ ಕೇರಳ ಸರ್ಕಾರದ ಮನವಿ ಮೇರೆಗೆ ಮಂಗಳವಾರ ರಾತ್ರಿ ಭಾರತೀಯ ಸೇನೆಯು ಎರಡು ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಿತ್ತು.

ಮದ್ರಾಸ್ ರೆಜಿಮೆಂಟ್ನ 12 ಮಂದಿಯ ತಂಡದಲ್ಲಿ ಪರ್ವತಾರೋಹಿಗಳು ಸೇರಿದಂತೆ ನುರಿತ ಸಿಬ್ಬಂದಿಗಳು ಒಳಗೊಂಡಿದ್ದರು. ಹಾಗೆಯೇ ಬೆಂಗಳೂರಿನ ಪ್ಯಾರಾಚೂಟ್ ರೆಜಿಮೆಂಟ್ ಸೆಂಟರ್‌ನಿಂದ ತೆರಳಿರುವ 22 ಸಿಬ್ಬಂದಿಯ ಎರಡನೇ ತಂಡವು ವಿಮಾನ ಮಾರ್ಗವಾಗಿ ಸೂಲೂರು ಮೂಲಕ ಘಟನಾ ಸ್ಥಳಕ್ಕೆ ತಲುಪಿತ್ತು. ಯುವಕನನ್ನು ರಕ್ಷಿಸಿದ ಬಳಿಕ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನಿಸಲಾಗಿದೆ.

About Author

Leave a Reply

Your email address will not be published. Required fields are marked *