ಕೇಂದ್ರದಿಂದ ದೇಶಾದ್ಯಂತ ಸಬ್ಸಿಡಿ ಆಧಾರಿತ ಕ್ಯಾಂಟೀನ್: 10 ರೂ.ಗೆ ಊಟ!
ನವದೆಹಲಿ,ಜ.20-ದೇಶಾದ್ಯಂತ ಸಬ್ಸಿಡಿ ಆಧಾರಿತ ಕ್ಯಾಂಟೀನ್ಗಳನ್ನು ಸ್ಥಾಪಿಸುವ ಚಿಂತನೆಯಲ್ಲಿ ಕೇಂದ್ರ ಸರ್ಕಾರವಿದೆ.
ಈ ಯೋಜನೆ ಜಾರಿಯಾದರೆ 10 ರಿಂದ 15 ರೂ.ಗೆ ಊಟ ದೊರೆಯಲಿದೆ.
ಬಡವರಿಗೆ ಕಡಿಮೆ ದರಕ್ಕೆ ಆಹಾರ ಲಭ್ಯವಾಗುವಂತೆ ಮಾಡುವ ಆಲೋಚನೆ ಇದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಯೋಜನೆಯಡಿ ಫಲಾನುಭವಿಗಳು ತಮ್ಮ ಪಡಿತರ ಅಥವಾ ಆಧಾರ್ ಕಾರ್ಡ್ಗಳನ್ನು ತೋರಿಸಿ ಊಟವನ್ನು ಪಡೆದುಕೊಳ್ಳಬಹುದು.
ಅನೇಕ ರಾಜ್ಯಗಳು ಈಗಾಗಲೇ ಇಂತಹ ಯೋಜನೆಗಳನ್ನು ಹೊಂದಿದೆ. ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್, ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಇದೆ. ಅದರಂತೆಯೇ ಕೇಂದ್ರ ಸರ್ಕಾರವು ಸಬ್ಸಿಡಿ ಆಹಾರ ಕ್ಯಾಂಟೀನ್ಗಳನ್ನು ಬೆಂಬಲಿಸುವ ಯೋಜನೆಯ ಪ್ರಸ್ತಾಪದ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತಿದೆ.
ಆದರೆ ಪ್ರಸ್ತುತ ಇರುವ ಪಿಎಂ ಗರೀಬ್ ಕಲ್ಯಾಣ ಯೋಜನೆ (PMGKY) ಮತ್ತು ಆಹಾರ ಸಬ್ಸಿಡಿ ಯೋಜನೆಯ ಪ್ರಸ್ತಾವನೆಯ ಸಾಧಕ-ಭಾದಕಗಳನ್ನು ತಿಳಿದುಕೊಂಡ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದೆ.