ಕರಳು ಚಿವುಟವಂತಿದೆ ಪುನೀತ್ ರಾಜ್ಕುಮಾರ್ ಅವರ ಈ ವ್ಯಂಗ್ಯ ಚಿತ್ರ
ಮೈಸೂರು: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಹೃದಯಾಘಾತದಿಂದ ನಟ ಪುನೀತ್ ರಾಜ್ಕುಮಾರ್ (46) ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಅಗಲಿಕೆಯ ಕಾರಣ ಖ್ಯಾತ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ ಅವರು ರಚಿಸಿರೋ ಕಾರ್ಟೂನ್ವೊಂದು ಕರಳು ಚಿವುಟವಂತಿದೆ.
ಹೌದು, ಸತೀಶ್ ಆಚಾರ್ಯ ರಚನೆಯ ಈ ಚಿತ್ರ ಎಂತವರನ್ನು ಕಣ್ಣೀರಾಧಾರೆ ಹರಿಸಿ ಬೇಸರವನ್ನುಂಟು ಮಾಡುತ್ತಿದೆ. ಕಂದಾ ಯಾಕಿಷ್ಟು ಆತುರಾ ಎಂಬ ಸಾಲುಗಳ ಮೂಲಕ ವರನಟ ದಿ.ಡಾ.ರಾಜಕುಮಾರ್ ಅವರು ಕೈ ಬೀಸಿಮ ಕರೆಯುತ್ತಿದ್ದು ಯಾಕಿಷ್ಟು ಆತುರ ಎನ್ನುವ ಮೂಲಕ ಚಿತ್ರ ರಚನೆಯಾಗಿದೆ.
ಮೈಸೂರಿನಾದ್ಯಂತ ಚಿತ್ರ ಪ್ರದರ್ಶನ ಬಂದ್!
ನಟ ಪುನೀತ್ ರಾಜ್ ಕುಮಾರ್ ನಿಧನ ಹಿನ್ನೆಲೆ. ಮೈಸೂರಿನಲ್ಲಿ ಚಿತ್ರಪ್ರದರ್ಶನವನ್ನ ಚಿತ್ರಮಂದಿರಗಳು ನಿಲ್ಲಿಸಿವೆ. ಈಗಾಗಲೇ ಪ್ರಾರಂಭವಾಗಿರುವ ಚಿತ್ರ ಪ್ರದರ್ಶನ ಮುಂದುವರೆಯುತ್ತಿವೆ. 2.30 ರ ಶೋ ಹಾಗೂ 4.30 ರ ಶೋಗಳು ಕ್ಯಾನ್ಸಲ್ ಆಗಿವೆ. ಕರ್ನಾಟಕ ಚಲಚಿತ್ರ ಪ್ರದರ್ಶಕರ ಮಹಾಮಂಡಳಿ ಈ ನಿರ್ಧಾರ ಕೈಗೊಂಡಿದ್ದು, ಮಂಡಳಿ ನಿರ್ಧಾರದಂತೆ ಪ್ರದರ್ಶನಗಳು ಕ್ಯಾನ್ಸಲ್ ಆಗಿವೆ ಎಂದು ಮೈಸೂರಿನಲ್ಲಿ ಮಂಡಳಿ ಉಪಾಧ್ಯಕ್ಷ ರಾಜಾರಾಮ್ ಮಾಹಿತಿ ನೀಡಿದ್ದಾರೆ.
ಚಿತ್ರಮಂದಿರಕ್ಕೆ ಕಲ್ಲೇಟು!
ಈ ನಡುವೆ ಮೈಸೂರಿನ ಉಡ್ಲ್ಯಾಂಡ್ ಚಿತ್ರಮಂದಿರದಲ್ಲಿ ಪುನೀತ್ ಅಭಿಮಾನಿಗಳ ಆಕ್ರೋಶ ಹೊರಹಾಕಿ, ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸುವಂತೆ ಒತ್ತಾಯ ಮಾಡಿದ್ದಾರೆ. ಚಿತ್ರಮಂದಿರದ ಬಾಗಿಲು ಬಡಿದು, ಪಾಪ್ಕಾರ್ನ್ ಗಾಡಿಯ ಗ್ಲಾಸ್ ಹೊಡೆದ ಅಭಿಮಾನಿಗಳು ಕಣ್ಣೀರಿಡುತ್ತಲೇ ಚಿತ್ರಮಂದಿರಕ್ಕೆ ಕಲ್ಲು ಬೀಸಿದ ಘಟನೆಯು ನಡೆದಿದೆ.

ಮೈಸೂರಿನಾದ್ಯಂತ ಶೋಕಾಚರಣೆ ಅಭಿಮಾನಿಗಳ ಬೇಸರ
ಮೈಸೂರಿನಲ್ಲಿ ಚಲನಚಿತ್ರ ಮಂದಿರಗಳ ಬಳಿ ನೀರವ ಮೌನವಿದ್ದು, ಇಂದು ಬೆಳಿಗ್ಗೆ ತಾನೇ ಶಿವರಾಜ್ ಕುಮಾರ್ ನಟನೆಯ ಭಜರಂಗಿ 2 ಚಿತ್ರ ಬಿಡುಗಡೆಯಾಗಿತ್ತು. ಉಡ್ ಲ್ಯಾಂಡ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ ಭಜರಂಗಿ 2 ಚಿತ್ರದ ವೇಳೆ ಕುಣಿದು ಕುಪ್ಪಳಿಸಿದ್ದರು ಅಭಿಮಾನಿಗಳು. ಆದರೆ ಮಧ್ಯಾಹ್ನದ ವೇಳೆಗೆ ಬರ ಸಿಡಿಲಿನಂತೆ ಬಂದಪ್ಪಳಿಸಿದ ಪುನೀತ್ ರಾಜಕುಮಾರ್ ಸಾವಿನ ಸುದ್ದಿ, ಉಡ್ ಲ್ಯಾಂಡ್ ಚಿತ್ರಮಂದಿರದ ಮುಖ್ಯದ್ವಾರದಲ್ಲಿ ಪುನೀತ್ ಭಾವಚಿತ್ರ ಇಟ್ಟು ಹೂ ಮಾಲೆ ಹಾಕಿದ್ದಾರೆ ಅಭಿಮಾನಿಗಳು. ಉಡ್ ಲ್ಯಾಂಡ್ ಚಿತ್ರಮಂದಿರದ ಬಳಿ ಗುಂಪುಗೂಡಿದ ಅಭಿಮಾನಿಗಳು, ತಮ್ಮ ನೆಚ್ಚಿನ ನಾಯಕ ನಟ ಪುನಿತ್ ರಾಜಕುಮಾರ್ ಸುದ್ದಿ ತಿಳಿದು ತೀವ್ರ ದುಖಿಃತರಾದರು. ಪುನೀತ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ರದ್ದು ಮಾಡಲಾಗಿದೆ.

ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಅರ್ಪಣೆ
ಭಾರತೀಯ ಜನತಾ ಪಕ್ಷದ ಮೈಸೂರು ನಗರ ಕಚೇರಿಯಲ್ಲಿ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರಿನಲ್ಲಿ ಅಪ್ಪು ಅಭಿಮಾನಿಗಳಿಂದ ಕಣ್ಣೀರಾ ಶ್ರದ್ಧಾಂಜಲಿ ಅರ್ಪಣೆ!
ಮೈಸೂರಿನ ಕೆ ಆರ್ ವೃತ್ತದಲ್ಲಿ ಜಮಾಯಿಸಿದ ಪುನೀತ್ ರಾಜಕುಮಾರ್ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕಿ, ದೀಪ ಬೆಳಗಿ ಪೂಜೆ ಸಲ್ಲಿಸಿದರು.
ಸದ್ಯ ಅವರ ಅಂತಿಮ ದರ್ಶನಕ್ಕೆ ಸರ್ಕಾರದಿಂದ ಸಿದ್ದತೆಗಳು ನಡೆಯುತ್ತಿದ್ದು, ಅಹಿತಕರ ಘಟನೆ ಆಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶೋಕಸಾಗರದಲ್ಲಿ ಇಡೀ ಭಾರತೀಯ ಚಿತ್ರರಂಗ ಮುಳುಗಿದ್ದು ಸ್ಯಾಂಡಲ್ವುಡ್ ನಟ ನಟಿಯರು ಕಣ್ಣೀರಾಗಿದ್ದಾರೆ. ಇತ್ತ ನೆಚ್ಚಿನ ನಟನನ್ನ ಕಳೆದುಕೊಂಡ ಅಭಿಮಾನಿಗಳ ರೋಧನೆ ಮುಗಿಲು ಮುಟ್ಟಿದೆ.
